ಜೀವನಯಾನ

Wednesday, February 26, 2014

ಕಾಡು ಸೇವಂತಿಗೆ ಹೂವಿನ ಬೀಜಗಳ ಹಾರಾಟ!

ಮನುಷ್ಯ ತನಗೆ ಬೇಕಾದ ಸಸ್ಯಗಳನ್ನು ಸಂಗ್ರಹಿಸಿ ಬೆಳೆಯುತ್ತಾನೆ. ಆದರೆ, ಕಾಡಿನಲ್ಲಿಯ ಸಸ್ಯಗಳು ಹಾಗಲ್ಲ. ಅವು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ, ಅದರ ಜೀವಕ್ಕೇ ಕುತ್ತು.  ಹೀಗಾಗಿ ಹಲವಾರು ಸಸ್ಯಗಳು ಸುಂದರವಾದ ಹಣ್ಣುಗಳನ್ನು ಬಿಟ್ಟು, ಪಕ್ಷಿಗಳನ್ನು ಆಕರ್ಷಿಸಿ ಅದರ ಮೂಲಕ
ಸಂತಾನವನ್ನು ಪಸರಿಸುತ್ತವೆ. ಇವೆಲ್ಲದರ ಹೊರತಾಗಗಿಯೂ ಕೆಲವು ಸಸ್ಯಗಳು ತನ್ನ ಬೀಜಗಳನ್ನು ಗಾಳಿಯಲ್ಲಿ ತೇಲಿಬಿಡುತ್ತವೆ. ಇವುಗಳನ್ನು ಗಾಳಿಯು ತನ್ನೊಂದಿಗೆ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಒಯ್ಯುತ್ತದೆ. ಹೊಸ ಪರಿಸರದಲ್ಲಿ ಬೀಜ ಕುಡಿಯೊಡೆಯುತ್ತದೆ! ಕಾಡು ಸೇವಂತಿಗೆಯ ಹೂವು ಇದಕ್ಕೊಂದು ಉದಾಹರಣೆ. ಇದಕ್ಕೆ ಇಂಗ್ಲಿಷ್ನಲ್ಲಿ ಡ್ಯಾಂಡೇಲಿಯನ್ ಸೀಡ್ಸ್ (dandelion flower) ಎನ್ನುತ್ತಾರೆ.  ಇದು ತಾನೇ ತಾನಾಗಿ ಎಲ್ಲೆಲ್ಲೋ ಬೆಳೆಯುತ್ತದೆ.


ಪ್ಯಾರಾಚ್ಯೂಟ್ ಕಲ್ಪನೆ:
ಇದು ತಿಳಿಹಳದಿ ಬಣ್ಣದ ಸೇವಂತಿಗೆಯನ್ನು ಹೋಲುತ್ತವೆ. ಇವು ಅತಿ ಹಗುರವಾಗಿದ್ದು, ನಿಶ್ಚಲ ಗಾಳಿಯಲ್ಲಿ ಕೂಡ ಚಲಿಸಬಲ್ಲದು. ಇವು ನಿಧಾನವಾಗಿ ಭೂಮಿಗೆ ಇಳಿಯುವುದನ್ನು ನೋಡಿದರೆ ಪ್ಯಾರಾಚ್ಯೂಟ್ ಕಲ್ಪನೆ ಬಂದಿರಬಹುದು. ಈ ವಿನ್ಯಾಸದ ಆಧಾಸಿಯೇ ಕ್ರೊಯೇಷಿಯಾದ ಫಾಸ್ಟ್ ರ್ಯಾಸ್ಸಿಕ್ ಎಂಬಾತ 1617ರಲ್ಲಿ ಪ್ಯಾರಾಚ್ಯೂಟ್ ಅನ್ನು ಸಿದ್ಧಪಡಿಸಿ, ಚರ್ಚ್ ವೊಂದರ ಮೇಲಿಂದ ಜಿಗಿದಿದು ಸುರಕ್ಷಿತವಾಗಿ ನೆಲವನ್ನು ತಲುಪಿದ್ದನಂತೆ.




ಯಾವಾಗಲೋ ಒಮ್ಮೆ ಬೆಳ್ಳನೆಯ ರೇಷ್ಮೆಯಂತ, ಹೊಳಪಾದ ಕೂದಲಿನಂಥ ಎಳೆಗಳನ್ನು ಹೊತ್ತಿಕೊಂಡ ಒಂದು ಬೀಜವು ಗಾಳಿಯಲ್ಲಿ ತೇಲುತ್ತ ಬಂದು ನಿಮ್ಮ ಕೈಗೆ ಸಿಕ್ಕಾಗ ಅದನ್ನು ಸಂತೋಷದಿಂದ ಹಿಡಿದು "ಅಜ್ಜನ ಗಡ್ಡ" ಎನ್ನುವ ಉದ್ಗಾರ ನಿಮ್ಮ ಬಾಯಿಂದಲೂ ಹೊರಬಂದಿರಬಹುದು! 
 
ಹಗಲಲ್ಲಿ ಹೂವು ರಾತ್ರಿ ಮೊಗ್ಗು!

ಕಾಡುಸೇವಂತಿಗೆ ಗಿಡಗಳು ಹೂವರಳಿಸುವ ಪ್ರಕ್ರಿಯೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಹೂವುಗಳು ಸೂರ್ಯನ ಬೆಳಕಿನಲ್ಲಿ ಮಾತ್ರ ಅರಳಿ ನಿಲ್ಲುತ್ತವೆ. ರಾತ್ರಿಯಾಗುತ್ತಿದ್ದಂತೆ ಮುದುಡಿಕೊಂಡು ಮತ್ತೆ ಮೊಗ್ಗಿನಂತಾಗುತ್ತದೆ! ಈ ಗಿಡದ ಹೂವು ಬಲಿತು ಬೀಜವಾದಾಗ ಹತ್ತಿಯನ್ನು ಹೋಲುವ ಸಣ್ಣದಾದ ನವಿರಾದ ಎಳೆಯ ದಾರಗಳು ಬೀಜದ ತುದಿಯಲ್ಲಿ ಜೋಲಾಡುತ್ತವೆ. ಗಾಳಿಯ ರಭಸಕ್ಕೆ ಅನುಗುಣವಾಗಿ ಬೀಜಗಳು ಕಿಲೋಮೀಟರ್ಗಟ್ಟಲೆ ದೂರದವರೆಗೂ ಹಾರಿಹೋಗಿ ಬೀಳುವುದುಂಟು. ಸಾಮಾನ್ಯವಾಗಿ ಜೂನ್ನಲ್ಲಿ ಬೀಜಗಳು ಬಲಿತು ಹಾರುತ್ತವೆ. ಭೂಮಿಯನ್ನು ಕಂಡ ಬೀಜ ಮಳೆಯ ನೀರು ತಾಗಿದೊಡನೆ ಮೊಳಕೆ ಒಡೆಯುತ್ತದೆ.

ಸೂರ್ಯ, ಚಂದ್ರ, ನಕ್ಷತ್ರ!
ಹಳದಿ ಬಣ್ಣದ ಕಾಡುಸೇವಂತಿಗೆ ಹೂವು ಅರಳಿ ನಿಂತಾಗ ಸೂರ್ಯನನ್ನೂ, ಬಲಿತು ಬಿಳಿಯ ಚೆಂಡಿನ ಆಕಾರವನ್ನು ಪಡೆದಾಗ ಚಂದ್ರನನ್ನೂ, ಅವುಗಳಿಂದ ಬೇರ್ಪಟ್ಟು ಗಾಳಿಯಲ್ಲಿ ತೇಲುವಾಗ ನಕ್ಷತ್ರದ ಆಕೃತಿಯನ್ನು ತಾಳುತ್ತದೆ.

ಔಷಧೀಯ ಗುಣ:
ಇದೊಂದು ಕಾಡು ಸಸ್ಯ. ಎಲ್ಲೆಂದರಲ್ಲಿ ಬೆಳೆಯುತ್ತೆ. ಆದರೆ, ಇದರ ಎಲೆಗಳಿಗೆ ಔಷಧೀಯ ಗುಣವಿದೆ. ಇದರ ಎಲೆಗಳನ್ನು ಹಿಂಡಿ ರಸವನ್ನು ಗಾಯಗಳಿಗೆ ಹಚ್ಚಲಾಗುತ್ತದೆ. ಅಡುಗೆ ಮಾಡಲು ಕೂಡ ಉಪಯೋಗಿಸುತ್ತಾರೆ.
 
ಸ್ವಯಂ ಪರಾಗಸ್ಪರ್ಶ!

ಕಾಡು ಸೇವಂತಿ ಹೂವಿನ ಬೀಜಗಳು ಊರೆಲ್ಲಾ ಅಲೆದು ನೆಲೆಕಂಡುಕೊಳ್ಳುತ್ತವೆ. ಆದರೆ, ಈ ಗಿಡಗಳು ಸ್ವತಃ ಹೂವನ್ನು ಅರಳಿಸಬೇಕಾದರೆ, ಇದರ ಜಾತಿಯ ಇನ್ನೊಂದು ತನ್ನದೇ ಜಾತಿಯ ಇನ್ನೊಂದು ಗಿಡದ ಸಾಮಿಪ್ಯ ಬೇಕು. ಅಂದರೆ, ಇವು ಸ್ವಯಂ ಪರಾಗಸ್ಪರ್ಶದ ಮೂಲಕ ಹೂವರಳಿಸುತ್ತದೆ. ಹೀಗಾಗಿ ಒಂದು ಕಾಡುಸಂಪಿಗೆ ಗಿಡದ ಪಕ್ಕ ಇನ್ನೊಂದು ಗಿಡ ಇರುತ್ತದೆ. 

No comments:

Post a Comment