ಜೀವನಯಾನ

Sunday, April 28, 2013

ಮುಂಗುಸಿಯ ಸರ್ಪ ದ್ವೇಷ!

ಮುಂಗುಸಿಗಳು ವಿಷ ಸರ್ಪದೊಂದಿಗೆ ಕಾದಾಟ ನಡೆಸುವುದಕ್ಕೆ ಪ್ರಸಿದ್ಧಿ. ಆದರೆ, ಸರ್ಪದ ವಿಷವೇಕೆ ಮುಂಗುಸಿಯನ್ನು ಏನೂ ಮಾಡುವುದಿಲ್ಲ? ಹಾವು ಮುಂಗುಸಿಗಳು ಏಕೆ ಕಾದಾಡುತ್ತವೆ? ಎನ್ನುವುದೇ ಕುತೂಹಲ.


ಹಾವು ಮುಂಗುಸಿ ಕಾದಾಟ:  
ನಿಜವೇನೆಂದರೆ, ಮುಂಗುಸಿಗಳು ತಾವಾಗಿಯೇ ಬಂದು ಹಾವಿನ ಹತ್ತಿರ ಸುಳಿದಾಡುತ್ತದೆ. ಇದರಿಂದ ಪ್ರಚೋದನೆಗೊಂಡ ಹಾವು ಮುಂಗುಸಿಯನ್ನು ಸಾಯಿಸಿ ಆಹಾರವನ್ನಾಗಿಸಿಕೊಳ್ಳುವ ಸಲುವಾಗಿ ಕಾದಾಟಕ್ಕೆ ಇಳಿಯುತ್ತದೆ. ಆದರೆ, ಮುಂಗುಸಿಗಳು ಹಾವಿಗಿಂತಲೂ ಚುರುಕು. ವೇಗವಾಗಿ ಸರಿದಾಡಿ ಹಾವಿನ ಹೊಡೆತದಿಂದ ತಪ್ಪಿಸಿಕೊಳ್ಳುತ್ತದೆ.  ಪದೇ ಪದೇ  ವಿಷದ ಹೆಡೆಯನ್ನು ನೆಲಕ್ಕೆ ಬಡಿದುಕೊಂಡು ಸುಸ್ತಾದ ಹಾವಿನ ಮೇಲೆರಗುವ ಮುಂಗುಸಿ ಒಂದೇ  ಏಟಿಗೆ ಅದರ ತಲೆಯನ್ನು ಛಿದ್ರಗೊಳಿಸಿಸುತ್ತದೆ!
ಮುಂಗುಸಿ ಸಾಯದಿರಲು ಮತ್ತೊಂದು ಅಂಶವೂ ಕಾರಣ. ಅದೆಂದರೆ, ಮುಂಗುಸಿಗಳು ಸಹ ಹಾವುಗಳಲ್ಲಿರುವಂತೆಯೇ ರಾಸಾಯನಿಕ ಗ್ರಂಥಿಗಳನ್ನು ಹೊಂದಿವೆ. ಅಲ್ಲದೆ ಮೈಮೇಲಿನ ಚರ್ಮ ದಪ್ಪವಾಗಿರುವ ಕಾರಣ ಹಾವಿನ ಕಡಿತ ಇವುಗಳಿಗೆ ತಾಗುವುದಿಲ್ಲ. ಇದರಿಂದಾಗಿ ಹಾನಿನ ನರಘಾತುಕ ವಿಷ ಮುಂಗುಸಿಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ, ಕೆಲವೊಮ್ಮೆ ಹಾವಿನಿಂದ ಹೊಡೆತ ತಿಂದು ಮುಂಗುಸಿಗಳೇ ಸಾವನ್ನಪ್ಪಿದ ಉದಾಹರಣೆಗಳೂ ಉಂಟು.  


ಮುಂಗೂಸಿಯ ದೇಹ ಲಕ್ಷಣ:
ಮುಂಗುಸಿ  ನಸು ಬೂದು ಬಣ್ಣವನ್ನು ಹೊಂದಿರುತ್ತದೆ. ಇದೊಂದು ಸಣ್ಣಗಾತ್ರದ ಸಸ್ತನಿಯಾಗಿದ್ದು, ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಜಾತಿಗಳಿವೆ. ಮುಂಗುಸಿಯ ಮುಖ ಮತ್ತು ಶರೀರ ಉದ್ದವಿರುತ್ತದೆ. ಸಣ್ಣ ದುಂಡಗಿನ ಕಿವಿ, ಕಿರಿದಾದ ಪಾದ,  ಉದ್ದನೆಯ ಬಾಲ ಹೊಂದಿರುತ್ತದೆ. ಕೆಲವು ಮುಂಗುಸಿಗಳ ಮೈಮೇಲೆ ಎದ್ದು ಕಾಣುವ ಬಿಳಿಯ ಪಟ್ಟೆಗಳಿರುತ್ತದೆ. ಗಾತ್ರದಲ್ಲಿ ಅಳಿಲನ್ನು ಹೋಲುತ್ತೆ. ಇದರ ದಂತ ಪಂಕ್ತಿ ಪುನುಗು ಬೆಕ್ಕಿನಂತಿದೆ. ಆಕಾರದಲ್ಲಿ 10ರಿಂದ 25 ಇಂಚು ದೊಡ್ಡದಾಗಿದ್ದು, 5 ಕೇಜಿಯಷ್ಟು ತೂಕ ಹೊಂದಿರುತ್ತದೆ. ಪ್ರಾದೇಶಿಕ ಪ್ರಾಣಿ ಎನಿಸಿದ ಇವು ನೆಲದೊಳಗೆ ಬಿಲ ತೋಡಿಕೊಂಡು ವಾಸಮಾಡುವುದೇ ಹೆಚ್ಚು. ಇನ್ನು ಕೆಲವು ಮುಂಗುಸಿಗಳು ಸ್ವಲ್ಪ ನೀರಿರುವ ಜಾಗದಲ್ಲಿಯೂ ಕಂಡುಬರುತ್ತದೆ. ಸಾಕಿದ ಮುಂಗುಸಿಗಳು 15 ರಿಂದ 20 ವರ್ಷ ಬದುಕುತ್ತದೆ.

ಹಾವನ್ನು ತಿನ್ನುವುದಲ್ಲ.
ಮುಂಗುಸಿ ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂನ್ನೂ ತಿನ್ನುತ್ತದೆ. ಹಕ್ಕಿಗಳ ಮೊಟ್ಟೆಗಳನ್ನು ಒಡೆದು ಅದರಲ್ಲಿನ ಮಾಂಸವನ್ನು ತಿನ್ನುವುದಕ್ಕೂ ಮುಂಗುಸಿ ಹೆಸರುವಾಸಿ. ಅಲ್ಲದೆ ಹಕ್ಕಿ, ಇಲಿ, ಕೀಟಗಳು, ಕಪ್ಪೆ ಮತ್ತು ಹುಳುಗಳನ್ನು ಇದರ ಮೆಚ್ಚಿನ ಆಹಾರ. ಅಲ್ಲದೆ ಹಣ್ಣು ಮತ್ತುಹಣ್ಣಿನ ಬೀಜಗಳನ್ನು ತಿನ್ನುತ್ತದೆ. ವಿಚಿತ್ರವೆಂದರೆ ಹಾವುಗಳನ್ನು ಸಾಯಿಸಿದರೂ ಅದನ್ನು ತಿನ್ನುವುದರಲ್ಲಿ ಮುಂಗುಸಿಗೆ ಆಸಕ್ತಿ ಕಡಿಮೆ. ಚೂರು ಪಾರುತಿಂದು ಹಾಗೇಯೇ ಬಿಡುತ್ತದೆ! 



ಮುಂಗುಸಿಯ ಆಮದಿಗೆ ನಿಷೇಧ!ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಮುಂಗಸಿ ಚುರುಕು  ಮತ್ತು ಕುಶಾಗ್ರಬುದ್ಧಿಯುಳ್ಳ ಪ್ರಾಣಿ. ಮುಂಗುಸಿ ಕೆಲವೊಂದು ತಂತ್ರಗಳನ್ನು ಬೇಗನೆ ಕಲಿಯಬಲ್ಲದು. ಇವು ಮಾನುಷ್ಯನೊಂದಿಗೆ ಉತ್ತಮ ಭಾಂದವ್ಯ  ಹೊಂದಿದೆ. ಭಾರತದ ಕಂದು ಮುಂಗುಸಿಗಳು ವಿಷ ಸರ್ಪವನ್ನು ಕೊಲ್ಲುವ ಸಾಮರ್ಥ್ಯಕ್ಕೆ ಹೆಸರುವಾಸಿ. ಸರ್ಪ ಮತ್ತು  ದುಷ್ಟಜಂತುಗಳ ನಿಯಂತ್ರಣಕ್ಕಾಗಿ ಇತರ ದೇಶಗಳು ಭಾರತೀಯ  ಮುಂಗುಸಿಯನ್ನು ಆಮದು ಮಾಡಿಕೊಳ್ಳುತ್ತದೆ.  ಆದರೆ, ಇವು ಇಲಿ, ಕೋಳಿ ಇನ್ನಿತರ ಪ್ರಾಣಿಗಳನ್ನು ಸಹ ಕೊಲ್ಲುವುದರಿಂದ ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಮುಂಗುಸಿಗಳನ್ನು  ಆಮದು ಮಾಡಿಕಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ.  

Sunday, April 21, 2013

ಕಡ್ಡಿಯ ದೇಹದ ಕೋಲು ಹುಳು!

ಹೊರಗಿನಿಂದ ನೋಡಿದರೆ ಮರಕ್ಕೆ ಜೋತು ಬಿದ್ದ ಒಂದು ಕಸದ ತುಣುಕು. ಆದರೆ, ಇದರ ಒಳಗೂ ಸಹ ಒಂದು ಪುಟ್ಟ ಜೀವಿ ವಾಸವಾಗಿದೆ. ಒಣಗಿದ ಕಡ್ಡಿಗಳಿಂದ ಅಥವಾ ಎಲೆಗಳನ್ನೇ ದೇಹವಾಗಿ ಹೊಂದಿದ ಚೀಲದ ಹುಳುಗಳಿವು. ಬ್ಯಾಗ್ ವಾರ್ಮ್ಸ್ (bag worms) ಎಂದು ಕರೆಯಲ್ಪಡುವ ಇವುಗಳನ್ನು ಹಳ್ಳಿಗಳಲ್ಲಿ ಕೋಲು ಹುಳು ಎನ್ನುತ್ತಾರೆ.


ಹೊರ ಪ್ರಪಂಚಕ್ಕೆ  ಕಾಣದ ಜೀವಿ!
ಇದೊಂದು ಲೆಪಿಡೊಪೆಟ್ರಾ (lepidoptera) ಕುಟುಂಬಕ್ಕೆ ಸೇರಿದ ಒಂದು ಮೋತ್ (ಚಿಟ್ಟೆ) ಕೀಟ. ಆದರೆ, ಹೆಣ್ಣು  ಕೀಟಗಳಿಗೆ  ಚಿಟ್ಟೆಗಳಂತೆ ರೆಕ್ಕೆ ಬರುವುದಿಲ್ಲ. ಗಂಡು ಕೀಟವು ಹಾರಲು ರೆಕ್ಕೆಗಳನ್ನು ಹೊಂದಿದ್ದು, ನೋಡಲು ಚಿಟ್ಟೆಗಳ ವರ್ಗಕ್ಕೆ ಸೇರಿದಂತೆ ಕಾಣುತ್ತದೆ. ಸದಾ ಹಸಿರಾಗಿರುವ ಮರಕ್ಕೆ ಜೋತು ಹಾಕಿಕೊಂಡು ಜೀವನ ಸಾಗಿಸುತ್ತವೆ. ತನ್ನ ಗೂಡಿನ ಒಳಗೆ ಲಾರ್ವಾ ರೂಪದಲ್ಲಿ ವಾಸವಾಗುತ್ತದೆ. ಇದರ ದೇಹ  ಹೊರ ಪ್ರಪಂಚಕ್ಕೆ ಕಾಣುವುದಿಲ್ಲ.ಕಾಣುವುದು ಹೊರಗಿನ ನಿರ್ಜೀವ ಕಸಕಡ್ಡಿಗಳು ಮಾತ್ರ! ನಿರ್ಜೀವ ದೇಹವೇ ಇದರ ಸುರಕ್ಷಾ ಕವಚ. 
 
ಕಸಕಟ್ಟಿಗಳಿಂದ ಮಾಡಿದ ದೇಹ:
ಕಾಡಿನಂಚಿನ ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತದೆ. ಒಣಗಿದ ಎಲೆ ಅಥವಾ ಕಡ್ಡಿಗಳನ್ನು ಬಳಸಿ ತನ್ನ ಮೈಗೆ  ತಾಗಿಕೊಂಡೇ ಅಂಟಿನ ಸಹಾಯದಿಂದ ಗೂಡು ನಿರ್ಮಿಸುವ ಚಾಕಚಕ್ಯತೆ ಇರುವುದು ಹೆಣ್ಣು ಮೋತ್ ಕೀಟಗಳಿಗೆ. ಈ ಕೀಟದ ಜೀವನ ಚಕ್ರ ತುಸು ಭಿನ್ನ ಮತ್ತು ಆಸಕ್ತಿಕರ. (ಲಾರ್ವ) ಹುಳದ ರೂಪದಲ್ಲಿ ಗೂಡೊಳಗೆ ಇದ್ದುಕೊಂಡು ಇವು ಬೆಳೆಯುತ್ತದೆ. ಗೂಡನ್ನು ಬಿಟ್ಟು ಎಂದಿಗೂ ಹೊರಗೆ ಬರುವುದಿಲ್ಲ. ಕಸಕಡ್ಡಿಗಳನ್ನು ಬಳಸಿ ವೈವಿಧ್ಯಮಯ ದೇಹ ರಚನೆಯ್ನು ಇವು ಪಡೆದು ಕೊಳ್ಳುತ್ತವೆ. ಇವು ಸುಮಾರು ಒಂದರಿಂದ ಎರಡು ಇಂಚಿನಷ್ಟು ದೊಡ್ಡದಾಗಿರುತ್ತದೆ.
 ಪರಾವಲಂಬಿ ಜೀವನ:
ಹೆಣ್ಣು ಹುಳು ಪರಾವಲಂಬಿ. ತಾನಿರುವ ಗಿಡಗಳ ಮೇಲೆ ಸಂಪೂರ್ಣ ಅವಲಂಬಿತವಾಗಿರುತ್ತದೆ. ಆಹಾರ ಸಿಗದಿದ್ದರೆ ಒಂದು ಗೂಡಿನಿಂದ ಇನ್ನೊಂದು ಸಸ್ಯಕ್ಕೆ ನಿಧಾನವಾಗಿ ಚಲಿಸಬಲ್ಲದು. ಚಲಿಸುವಾಗ ರೇಷ್ಮೆ ನೂಲುಗಳ್ನು ಸುತ್ತುತ್ತಾ ಸಾಗುತ್ತದೆ. ಆಹಾರವನ್ನು ಪಡೆಯುವ ಸಲುವಾಗಿ ಗೂಡಿನ ಒಂದು  ಬದಿಗಳಲ್ಲಿ ರಂದ್ರಗಳನ್ನು ಬಿಟ್ಟಿರುತ್ತದೆ. ಇದರ ಮೂಲಕ  ಆಹಾರಗಳನ್ನು  ಪಡೆದುಕೊಳ್ಳುತ್ತದೆ. ಕೆಲ ಸಸ್ಯಗಳಿಗೆ ಇದು ಮಾರಕವಾಗಿದ್ದೂ ಇದೆ. ನಮ್ಮ ದೇಶದ ರೈತರಿಗೆ ಇಂತಹ ಚೀಲದ ಹುಳಗಳ ಉಪಟಳ ಅಷ್ಟಟಾಗಿ ಇಲ್ಲ. ಕೆಲವು ವಿದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಕೀಟಗಳು ಉಪಟಳ ನೀಡುವಷ್ಟು ಸಂಖ್ಯೆಯಲ್ಲಿದೆ. 

ರೆಕ್ಕೆ ಗಳಿರುವ ಗಂಡು ಮೊತ್ ಹುಳು
ಗೂಡಿನಲ್ಲೇ ಜೀವನ; ಅಲ್ಲೇ ಸಾವು!
ಹೆಣ್ಣು ಹುಳುಗಳ ಸಂತಾನ  ಕ್ರಿಯೆ ಕೂಡಾ ಗೂಡಿನ ರಂದ್ರದ ಮೂಲವೇ ನಡೆಯುತ್ತದೆ. ಫ್ರೌಢಾವಸ್ಥೆಗೆ ತಲುಪಿದ ಗಂಡು ಹುಳುಗಳು  ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ. ರಂದ್ರದ ಮೂಲಕ ಗಂಡು ಕೀಟ ಪಸರಿಸುವ ನೂರಾರು ಬೀಜಾಣುಗಳನ್ನು ಗೂಡಿನಲ್ಲಿರುವ ಹೆಣ್ಣು ಪಡೆದುಕೊಳ್ಳುತ್ತದೆ. ಗರ್ಭಧಾರಣೆ ಆಗಿ ಮೊಟ್ಟೆಗಳ ಹೊರುವ ತಾಯಿ ಕೀಟ ತನ್ನಷ್ಟಕ್ಕೆ ತಾನೇ ಅಲ್ಲಿಯೇ ಮುದುಡಿ ಸಾವನ್ನಪ್ಪುತ್ತದೆ. ಲಾರ್ವಾಗಳ ಬೆಳವಣಿಗೆ ತುಂಬಾ ನಿಧಾನ. ಅನೇಕ ತಿಂಗಳ ಬಳಿಕ ಮೊಟ್ಟೆಗಳು ಬೆಳೆದು ಮರಿಕೀಟಗಳು ಹುಟ್ಟುತ್ತವೆ. ಗಂಡು ಕೀಟಗಳು ರೆಕ್ಕೆ ಮೂಡಿ ಹಸಿರು ಎಲೆಗಳ ಹರಿತ್ತನ್ನು ತಿಂದು ದೊಡ್ಡದಾಗುತ್ತದೆ. ಹೆಣ್ಣು ಲಾರ್ವಾ  ಹುಳುಗಳು ಗಾಳಿಯಲ್ಲಿ ತೇಲಿ ಮರ ಗಿಡಗಳ ಮೇಲೆ ಬಂದು ಬೀಳುತ್ತವೆ. ಮತ್ತೆ ಗೂಡುಗಳ ನಿರ್ಮಾಣ ಶುರುವಾಗುತ್ತದೆ.


 

Sunday, April 14, 2013

ಸಿಂಹ ಮುಖದ ಸಿಂಗಳೀಕ

ಸಿಂಗಳೀಕ ಮಕಾಕ್ ಸೆಲೆನಸ್ ಪ್ರಜಾತಿಗೆ ಸೇರಿದ ಹಳೆಯ ಪ್ರಪಂಚದ ವಾನರ. ಆದರೆ, ರೂಪದಲ್ಲಿ ಸಿಂಹವನ್ನೇ ಹೋಲುತ್ತದೆ! ಕಪ್ಪು ಮುಖ, ಕುತ್ತಿಗೆಯ ಭಾಗದಲ್ಲಿ ಸಿಂಹದಂತಹ (ಕೇಸರ) ಗಡ್ಡ, ಬಾಲವೂ ಸಿಂಹದ ರೀತಿ. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಈ ಸಿಂಗಳೀಕಗಳು  ನಮ್ಮ ದೇಶ ಹೊರತುಪಡಿಸಿದರೆ ಬೇರೆ ಯಾವ ದೇಶಗಳಲ್ಲಿಯೂ ಕಂಡುಬರುವುದಿಲ್ಲ. 


ಸಿಂಗಳೀಕನ ಗುಣ ಸ್ವಭಾವ 
ಸಿಂಗಳೀಕಗಳು ತುಂಬಾ ನಾಚಿಕೆಯ ಸ್ವಭಾವದವು. ಇವು ಮರವಾಸಿಗಳು. ನೆಲಕ್ಕೆ ಇಳಿಯುವುದು ತುಂಬಾ ಅಪರೂಪ. ದೈತ್ಯ ಮರಗಳ ಮೇಲೆ 10ರಿಂದ 20 ಸದಸ್ಯರ ಚಿಕ್ಕ ಗುಂಪಿನಲ್ಲಿ ವಾಸಿಸುತ್ತವೆ. ಇದು  ಹಗಲಿನಲ್ಲಿ ಎಚ್ಚರದಲ್ಲಿದ್ದು ರಾತ್ರಿ ಮಲಗುವ ಪ್ರಾಣಿ. ಅರಣ್ಯದ ಮಧ್ಯಭಾಗದ ಎತ್ತರದ ಮರಗಳಲ್ಲಿ ವಾಸ ಮಾಡುತ್ತವೆ. ಆಹಾರ ಹುಡುಕುತ್ತ ದಿನಕ್ಕೆ ಸುಮಾರು ಹತ್ತು ಕಿಲೋಮೀಟರ್ ಸಂಚರಿಸುತ್ತವೆ. ಇದರ ದೇಹ ಮತ್ತು ತಲೆಯ ಭಾಗ 42 ರಿಂದ 61 ಸೆಂ.ಮೀ ಉದ್ದವಿರುತ್ತದೆ. ಬಾಲ 25 ಸೆಂ.ಮೀ ಉದ್ದವಿರುತ್ತದೆ. ಸುಮಾರು 10 ಕೇಜಿ ತೂಕ ಹೊಂದಿರುತ್ತದೆ.

ಹೆಣ್ಣಿನ ಗುಂಪಿಗೆ ಗಂಡೇ ಮುಖಂಡ!

ಇವು ಸದಾ ಗುಂಪಾಗಿಯೇ ಇರುತ್ತವೆ. ಒಂದು ಗುಂಪಿನಲ್ಲಿ 20ರಿಂದ 30 ಸಿಂಗಳೀಕಗಳು ಇರುತ್ತವೆ. ಗುಂಪಿಗೆ ಗಂಡು ಮುಖಂಡ. ಆದರೆ, ಗುಂಪಿನಲ್ಲಿ ಹೆಣ್ಣು ಸಿಂಗಳೀಕಗಳ ಸಂಖ್ಯೆಯೇ ಹಚ್ಚು! ಎರಡು ವರ್ಷಕ್ಕೊಮ್ಮೆ ಸಿಂಗಳೀಕಗಳು ಗರ್ಭ ಧರಿಸುತ್ತವೆ. ಒಂದು ಸಿಂಗಳೀಕ ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ. ಬೇರೆ ಕೋತಿಗಳಂತೆ ಇವು ಮನುಷ್ಯರ ವಾಸಸ್ಥಾನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.


ಶತ್ರುಗಳನ್ನು ಕೂಗಿ ಹೆದರಿಸುತ್ತದೆ!

ಇದು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದ ಪ್ರಾಣಿ. ತಮ್ಮದೇ ಪ್ರತ್ಯೇಕ ಪಂಗಡಗಳನ್ನು ರಚಿಸಿಕೊಳ್ಳುತ್ತವೆ.  ತನ್ನ ಗುಂಪನ್ನು ಪ್ರವೇಶ ಮಾಡದಂತೆ ಇನ್ನೊಂದು ಗುಂಪಿಗೆ ಕೂಗಿ ಹೇಳುತ್ತದೆ. ಶತ್ರುಗಳು ಗೋಚರವಾಗುತ್ತಿದ್ದಂತೆ ಎಚ್ಚರಿಕೆಯ ಕೂಗು ಹಾಕುತ್ತದೆ. ಕೂಗು ಸುಮಾರು ಅರ್ಧ ಕಿ.ಮೀ.ವರಗೆ ಕೇಳಿಸುತ್ತದೆ. ಸಾಮಾನ್ಯವಾಗಿ ಹೆಣ್ಣುಸಿಂಗಳೀಕ ನಾಲ್ಕು ವರ್ಷಕ್ಕೊಮ್ಮೆ ಪ್ರೌಢಾವಸ್ಥೆಗೆ ಬರುತ್ತದೆ. ಮರಿಗಳು ಆರು ತಿಂಗಳವರೆಗೆ ತಾಯಿಯ ಜತೆಯಲ್ಲಿದ್ದು ನಂತರ ಗುಂಪಿನ ಸಂಪರ್ಕ ಕಳೆದುಕೊಳ್ಳುತ್ತದೆ. 

ಶಾಕಾಹಾರಿ-ಮಾಂಸಾಹಾರಿ ಪ್ರಾಣಿ

ಸಿಂಗಳೀಕಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎನ್ನುವ ಎರಡು ಪ್ರಭೇದಗಳಿವೆ. ಕಾಡಿನಲ್ಲಿ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಗಳೇ ಇದರ ಮುಖ್ಯ ಆಹಾರ. ಸಸ್ಯಾಹಾರಿ ಸಿಂಗಳಿಕಗಳು 90 ನಮೂನೆಯ ಹಣ್ಣುಗಳನ್ನು ತಿಂದು ಬದುಕುತ್ತವೆ. ಪಶ್ಚಿಮ ಘಟ್ಟದಲ್ಲಿ ದೊರೆಯುವ ಬಗೆನೆ, ಮಾವು, ಪತ್ರೆ, ಹಲಸು, ಮಂಡಿಗೆ, ಕರಿಮಿಟಗ  ಮತ್ತಿತರ ಹಣ್ಣುಗಳು ಇವುಗಳಿಗೆ ಇಷ್ಟ. ಮಾಂಸಾಹಾರಿ ಸಿಂಗಳೀಕಗಳು ಕಂಬಳಿಹುಳು, ಓತಿಕ್ಯಾತ, ಅಳಿಲು, ಕಬ್ಬೆಕ್ಕು, ಜೇಡ, ಮಿಡತೆ, ಇರುವೆ ಹಾಗೂ ಗೆದ್ದಲ ಹುಳಗಳನ್ನು ತಿನ್ನುತ್ತವೆ. ಇದರ ಜೀವಿತಾವಧಿ ಸರಿಸುಮಾರು 20 ವರ್ಷ.

ಅಳಿದು ಹೋಗುವ ಅಪಾಯ
ಹಿಂದೊಒಮ್ಮೆ  ಪಶ್ಚಿಮ ಘಟ್ಟದಲ್ಲಿ ವಿಪುಲವಾಗಿ ಕಂಡುಬರುತ್ತಿದ್ದ ಸಿಂಗಳೀಕಗಳ ಸಂಖ್ಯೆ ಇಂದು ಗಣನೀಯವಾಗಿ ಕುಸಿದಿದೆ. ಹವಾಗುಣ, ಕಾಡಿನ ಅತಿಕ್ರಮಣ, ಅರಣ್ಯ ನಾಶದಿಂದಾಗಿ ಇವುಗಳ ಸಂತತಿ ಕ್ಷೀಣವಾಗುತ್ತಿದೆ. ಜತೆಗ ಆಹಾರದ ಕೊರತೆಯಿಂದಾಗಿ 3 ರಿಂದ ನಾಲ್ಕು ವರ್ಷಗಳಿಗೊಮ್ಮೆ ಸಂತಾನೋತ್ಪತ್ತಿ ಮಾಡುವ ಹಂತಕ್ಕೆ ತಲುಪಿವೆ. ಹೀಗಾಗಿ ಸಿಂಗಳೀಕಗಳನ್ನು ಅಳಿವಿನ ಅಂಚಿನಲ್ಲಿರುವ ಜೀವಪ್ರಭೇದ ಎಂದು ಪರಿಗಣಿಸಲಾಗಿದೆ. ಈ ಆತಂಕದ ನಡುವೆಯೇ ಖುಷಿಯ ವಿಚಾರ ವೆಂದರೆ, ಇತ್ತಿಚೆಗೆ ಕೈಗೊಳ್ಳಲಾದ ಸಂಶೋಧನೆಯಲ್ಲಿ ಕರ್ನಾಟಕ, ಕೇರಳ ಮತ್ತು  ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ 3000ದಿಂದ 3500 ಸಿಂಗಳೀಕಗಳು ವಾಸವಾಗಿವೆ ಎನ್ನುವುದೇ ಸಮಾಧನಾದ ವಿಷಯ.

 

Sunday, April 7, 2013

ಸುವಾಸನೆ ಸೂಸುವ ಪುನುಗು ಬೆಕ್ಕು!

ಸುವಾಸನೆ ಸೂಸುವ ಕಸ್ತೂರಿ ಮೃಗದ ಬಗ್ಗೆ ಕೇಳದವರೇ ಇಲ್ಲ. ಅದೇರೀತಿ ಸುಗಂಧ ಹೊರಸೂಸುವ ಇನ್ನೊಂದು ಪ್ರಾಣಿ ಪುನುಗು ಬೆಕ್ಕು. ಆದರೆ, ನಿಜವಾಗಿಯೂ ಇದು ಬೆಕ್ಕಲ್ಲ. ಬೆಕ್ಕಿನಂತೆ ಕಾಣುವ ಒಂದು ಪ್ರಾಣಿ. ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಟ ಪ್ರಾಣಿ ಮುಂಗೂಸಿಗಳ ಕುಟುಂಬಕ್ಕೆ ಸೇರಿದ ನಿಶಾಚರ ಸಸ್ತನಿ. ಇವು ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದೆ. ಮೈಮೇಲಿನ ಉಣ್ಣೆಗರಿ ಕಂದು ಅಥವಾ ಬೂದು ಬಣ್ಣದ ಆಕಾರದಲ್ಲಿದೆ. ಮೈಮೇಲೆ ವಿವಿಧ ಆಕಾರದ ಪಟ್ಟಿಗಳನ್ನು ಹೊಂದಿದೆ. 



ಮೂತ್ರದಲ್ಲಿ ಸುಗಂಧ ದ್ರವ್ಯ! 
ಈ ಬೆಕ್ಕಿನ ಜನನಾಂಗದ ಗ್ರಂಥಿಯಿಂದ ಘಮಘಮ ಸುಗಂಧ ದ್ರವ್ಯ ಬಿಡುಗಡೆ ಆಗುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆ ಯುಕ್ತ ಮೂತ್ರ ಜೇನು ತುಪ್ಪದಂತಿರುತ್ತದೆ. ಇದನ್ನು ಸುವಾಸನೆ (ಸೆಂಟ್) ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸಯವ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಸುವಾಸನೆ ಯುಕ್ತ ಮೂತ್ರವನ್ನು ತಾನು ವಾಸಿಸುವ ಪ್ರದೇಶದ ಗಡಿಯನ್ನು ಗುರುತಿಸುವ ಸಲುವಾಗಿ ಉಪಯೋಗಿಸುತ್ತದೆ. ಮಾರುಕಟ್ಟೆಯಲ್ಲಿ ಪುನುಗು ಬೆಕ್ಕಿನ ಮೂತ್ರಕ್ಕೆ ವಿಪರೀತ ಬೇಡಿಕೆ ಇದೆ. ಅದೇರೀತಿ ಮೈ ಮೇಲಿನ ಉಣ್ಣೆಗರಿಗಳಿಂದಲೂ ಪುನುಗು ಬೆಕ್ಕು ಹೆಸರುವಾಸಿ.

ಬಿಲದಲ್ಲಿ ವಾಸಿಸುವ ನಿಶಾಚರಿ
ಜನ ವಸತಿಯಿಂದ ಮತ್ತು ಇತರೆ ಪ್ರಾಣಿಗಳ ಸಹವಾಸದಿಂದ ದೂರ ಉಳಿಯಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚ ಮತ್ತು ನಾಚಿಕೆ ಸ್ವಭಾವದ್ದು. ರಾತ್ರಿಯ ವೇಳೆಯಲ್ಲಿ ಮಾತ್ರ ಆಹಾರ ಹೆಕ್ಕಲು ತೆರಳುವ ಈ ಪುನುಗು, ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಆದರೆ, ರಾತ್ರಿ ಮತ್ತು ಹಗಲಿನಲ್ಲಿಯೂ ಕಣ್ಣು ಸ್ಪಷ್ಟವಾಗಿ ಕಾಣಿಸುತ್ತದೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ ಮಾಡುತ್ತದೆ. ಮಳೆ ಕಾಡುಗಳಲ್ಲಿ ಕುರುಚಲ ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತದೆ. ಹೀಗಾಗಿ ಹಿಂದಿ ಭಾಷೆಯಲ್ಲಿ ಇದನ್ನು ಸ್ಮಶಾನ ಚೇಳು ಎಂದು ಕರೆಯಲಾಗುತ್ತದೆ.


ಅಳಿಯುತ್ತಿರುವ ಸಂತತಿ
ಇವುಗಳನ್ನು ಹಿಡಿದು ತೀವ್ರ ಹಿಂಸೆಗೆ ಒಳಪಡಿಸಿ ಮೂತ್ರದ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಹೇರಲಾಗುತ್ತದೆ. ಅಲ್ಲದೇ ಇದರ ಉಣ್ಣೆ ಕೂದಲನ್ನು ಪಡೆಯುವ ಸಲುವಾಗಿ ಪುನುಗು ಬೆಕ್ಕನ್ನು ಬೇಟೆಯಾಡಲಾಗುತ್ತದೆ. ಜತೆಗೆ ಇದು ತಿನ್ನುವ ಹಣ್ಣಿನ ಗಿಡಗಳ ನಾಶದಿಂದಾಗಿ ಅಪರರೂಪ ಸಂತತಿಗೆ ಸೇರಿದ ಪುನುಗು ಬೆಕ್ಕು ನಮ್ಮಿಂದ ಕಣ್ಮರೆಯಾಗುವ ಅಪಾಯ ಎದುರಾಗಿದೆ.


   
ಸ್ವಭಾವ ಮತ್ತು ಲಕ್ಷಣಗಳು:
  • ವಿವಿರಿಡೇ ಕುಟುಂಬಕ್ಕೆ ಸೇರಿದ ಪುನುಗಿಗೆ ಇಗ್ಲಿಷ್ನಲ್ಲಿ ಸಿವೆಟ್ ಕ್ಯಾಟ್ (civet cat) ಎಂದು ಕರೆಯಲಾಗುತ್ತದೆ.
  •  ಪುನುಗು ಬೆಕ್ಕು ಆಫ್ರಿಕ ಮತ್ತು ಏಷಿಯಾ ಖಂಡಗಳಲ್ಲಿ ಕಂಡು ಬರುತ್ತದೆ.
  •  ಪ್ರಾಯಕ್ಕೆ ಬಂದ ಒಂದು ಪುನುಗು  ಬೆಕ್ಕು ಒಂದರಿಂದ ಮೂರು ಪೌಂಡ್ ತೂಕವಿರುತ್ತದೆ. 
  • ಇದರ ದೇಹ 30 ಇಂಚು, ಬಾಲ 20 ಇಂಚು ಉದ್ದವಾಗಿರುತ್ತದೆ. 15 ಇಂಚಿನಷ್ಟು ಎತ್ತರವಿರುತ್ತದೆ.
    ಹಣ್ಣೆಂದರೆ ಪುನುಗು ಬೆಕ್ಕಿಗೆ ತೀರಾ ಇಷ್ಟ. 
  • ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ಅಚ್ಚು ಮೆಚ್ಚು. ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವ ಪುನುಗು ಬೆಕ್ಕು- ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿಗೂಡಿನ ತತ್ತಿಗಳು ಮತ್ತು  ಕೀಟಗಳನ್ನು ಸಹ ತಿನುತ್ತವೆ. ಇವು ಭೂಮಿಯ ಮೇಲೆ ವಾಸಿಸುವುದೇ ಹೆಚ್ಚು. 
  • ಕುಟುಂಬದಲ್ಲಿ ತಮ್ಮದೇ ಆದ ವಿಶಿಷ್ಟ ಗುಂಪನ್ನು ರಚಿಸಿಕೊಂಡಿರುತ್ತವೆ. ಬಿಸಲು ಈ ಪ್ರಾಣಿಗಳಿಗೆ ಅಷ್ಟಕ್ಕಷ್ಟೆ. ಮೇಲಿಂದ  ಮೇಲೆ ನೀರು ಕುಡಿಯುವುದು ಈ ಪ್ರಾಣಿಗಳ ಸ್ವಭಾವ.





 

Wednesday, April 3, 2013

ವಿಶ್ವದ ಏಕಮಾತ್ರ ಅಮರ ಜೀವಿ!

ವಿಶ್ವದ ಸಕಲ ಜೀವಜಂತುಗಳಿಗೂ ಹುಟ್ಟಿದ ಮೇಲೆ ಸಾವು ಬಂದೇ ಬರುತ್ತದೆ. ಆದರೆ, ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆ ಜೀವಿ ಅಮರವಾಗುತ್ತದೆ. ಪುರಾಣ ಕಥೆಗಳಲ್ಲಿ ದೇವತೆಗಳಿಗೆ ಅಮರತ್ವವಿದೆ ಎಂದು ಹೇಳಲಾಗಿದೆ.  ಆದರೆ, ಇಂಥದ್ದೊಂದು ಅಮರ ಜೀವಿ ಭೂಮಿಯಲ್ಲಿಯೂ ಇದೆ. ಸಾಗರ ಜೀವಿಯಾದ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ  ( turritopsis nutricula) ಎಂಬ ಹೆಸರಿನ ಲೋಳೆ ಮೀನು (ಜೆಲ್ಲಿ ಫಿಶ್)  ವಿಶ್ವದ ಏಕಮಾತ್ರ
ಅಮರ ಜೀವಿಯಾಗಿದೆ!


 ವೃದ್ಧಾಪ್ಯ  ಎಂಬುದೇ ಇಲ್ಲ!
ಈ ಲೋಳೆ ಮೀನು ಹೈಡ್ರೋಜೋವಾ ಅಕಶೇರುಕ ವರ್ಗಕ್ಕೆ ಸೇರಿದ್ದು ( ಬೆನ್ನುಮೂಳೆ ಇಲ್ಲದ ಪ್ರಜಾತಿ) ಸಾವು ಹತ್ತಿರ ಬರುತ್ತಿದ್ದಂತೆ ತನ್ನ ಜನನಾವಸ್ಥೆಯಾದ ಪಾಲಿಪ್ ಸ್ಥಿತಿಗೆ ಮರಳುತ್ತದೆ. ಅಂದರೆ, ವೃದ್ಧಾಪ್ಯದಿಂದ ನೇರ ಜನನಾವಸ್ಥೆಗೆ. ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ ಎಂದು ಹೆಸರಿಸಲಾಗಿದೆ. ಈ ಮೂಲಕ ಮತ್ತೆ ಮತ್ತೆ ಬಾಲ್ಯಾವಸ್ಥೆಗೆ ಮರಳಿ ಅಮರತ್ವ ಪಡೆಯುತ್ತದೆ ಈ ಜೆಲ್ಲಿ ಫಿಶ್. ಇತರ ಪ್ರಾಣಿಗಳು ಇದನ್ನು ಕೊಲ್ಲುವವರೆಗೂ ಈ ಕ್ರಿಯೆ ಸತತವಾಗಿ ನಡೆಯುತ್ತಲೇ ಇರುತ್ತದೆ. ವಿಜ್ಞಾನಿಗಳು ಇದುವರೆಗೆ ನಡೆಸಿರುವ ಪರೀಕ್ಷೆಯಲ್ಲಿ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ ನೈಸರ್ಗಿ ಕವಾಗಿ ಸಾವನ್ನಪ್ಪಿದ ಬಗ್ಗೆ ಒಂದೇ ಒಂದು ಉದಾಹರಣೆಯೂ ಲಭ್ಯವಾಗಿಲ್ಲ. ಅಮರತ್ವ ಗುಣ ಹೊಂದಿರುವ ಜೀವಿ ಇದುವರೆಗೆ ಇದೊಂದೇ ಪತ್ತೆಯಾಗಿದ್ದು, ಸಧ್ಯಕ್ಕೆ ಜಗತ್ತಿನ ಏಕಮಾತ್ರ ಜೀವಿಯಾಗಿದೆ.

ಸಂತಾನದ ಬಳಿಕ ಮರುಹುಟ್ಟು!
ಭೂಮಧ್ಯರೇಖೆಯ ಸಮಶೀತೋಷ್ಣ ವಲಯದ ಸಾಗರದಲ್ಲಿ ಕಂಡುಬರುವ ಈ ಲೋಳೆ ಮೀನು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸಹೊಂದಿದೆ. ಕಣ್ಣು ಶುದ್ಧವಾಗಿದ್ದವರು ಬರಿಗಣ್ಣಿನಿಂದಲೂ  ಇದನ್ನು ನೋಡಬಹುದು. ಹೆಚ್ಚಾಗಿ ಈ ಲೋಳೆ ಮೀನು ಆಸ್ಟ್ರೇಲಿಯಾದ ಬಳಿ ಪತ್ತೆಯಾಗಿವೆ. ಸಾಮಾನ್ಯವಾಗಿ ಇತರ ಜೆಲ್ಲಿ ಫಿಶ್ ಗಳು ಸಂತಾನ ಕ್ರಿಯೆಯ ಬಳಿಕ ಸಾವನ್ನಪ್ಪುತ್ತವೆ. ಆದರೆ, ಈ ಅಜರಾಮರ ಜೆಲ್ಲಿಫಿಶ್ನ ವಿಶೇಷವೆಂದರೆ ಇದು ಸಂತಾನ ಕ್ರಿಯೆಯ ಬಳಿಕ ಮರುಹುಟ್ಟು ಪಡೆದುಕೊಳ್ಳುತ್ತದೆ.

ಮರುಹುಟ್ಟಿನ ಹಿಂದಿನ ರಹಸ್ಯವೇನು?
ಟ್ರಾನ್ಸ್ಡಿಫರೆನ್ಸಿಯೇಶನ್ ಪ್ರಕ್ರಿಯೆಯ ಮೂಲಕ ಜೆಲ್ಲಿಫಿಶ್ ಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ. ಜತೆಗೆ ತನ್ನ ಕೋಶಗಳನ್ನು ಬದಲಾಯಿಸುವ ಸಾಮಥ್ರ್ಯಹೊಂದಿದೆ ಮತ್ತು ತನ್ನ ದೇಹವನ್ನು ನೂತನ ಕೋಶಗಳನ್ನಾಗಿ ಪರಿವರ್ತಿಸುತ್ತದೆ. ಜೆಲ್ಲಿಫಿಶ್ ಪಾಲಿಪ್ (ಬಾಲ್ಯಾವಸ್ಥೆ) ಸ್ಥಿತಿಗೆ ಮರಳುವಾಗ  ಪಾಲಿಪ್ಗಳ ಕಾಲೋನಿಯನ್ನೇ ನಿಮರ್ಮಾಣಮಾಡುತ್ತದೆ. ಈ ಸಮೂಹ ಒಂದಕ್ಕೊಂದು ಅಂಟುಕಂಡು ನೂತನ ಜೀವಿ ಉತ್ಪತ್ತಿಯಾಗುತ್ತದೆ.  ಹೀಗೆ ಮರುಹುಟ್ಟು ಪಡೆದ ಜೀವಿ ಹೊಸ ಸಮೂಹ ರಚಿಸಲು ಆರಂಭಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ. ಹೀಗಾಗಿ ಇದಕ್ಕೆ ಸಾವು ಎಂಬುದೇ ಎದುರಾಗುವುದಿಲ್ಲ. ಈ ಗುಣ ಹಲ್ಲಿ ಮತ್ತು ಸರಿಸೃಪ ಮೊದಲಾದವುಗಳಲ್ಲಿ ಕೊಂಚಮಟ್ಟಿಗೆ ಕಂಡುಬರುತ್ತದೆ. ಹಲ್ಲಿ ಓತಿಕೇತಗಳು ಅಪಾಯ ಕಂಡು ಬಂದಾಗ  ತಮ್ಮ ಬಾಲವನ್ನು ಉದುರಿಸಿ ಓಡುತ್ತವೆ. ಉದುರಿದ ಬಾಲ ವಿಲವಿಲನೆ ಒದ್ದಾಡುವುದನ್ನು ನೋಡಿ ಇದನ್ನೂ ಒಂದು ಜೀವಿ ಎಂದೇ ಭಾವಿಸಿ ಅದರ ಮೇಲೆ ವೈರಿ ದಾಳಿ ನಡೆಸುತ್ತದೆ. ಇತ್ತ ಸುರಕ್ಷಿತವಾದ ಹಲ್ಲಿಗೆ ಕೆಲವು ಸಮಯದಲ್ಲೇ ಹೊಸ ಬಾಲ ಬೆಳೆಯುತ್ತದೆ. ಆದರೆ ಇವು ಕೇವಲ ಒಂದು ಅಂಗವನ್ನು ಮಾತ್ರ ಮರಳಿಸ ಬಲ್ಲವೇ ಹೊರತು ಲೋಳೆ ಮೀನಿನ ತರಹ ಮತ್ತೆ ಹೊಸಜನ್ಮ ಪಡೆಯಲಾರವು.

ವೈಜ್ಞಾನಿಕ ಅಚ್ಚರಿ!
ವಿಜ್ಞಾನಿಗಳಲ್ಲಿ ತೀವ್ರ  ಕುತೂಹಲ ಕೆರಳಿಸಿರುವ ಈ ಲೋಳೆ ಮೀನಿನ ರಹಸ್ಯ ಭೇದಿಸಲು ಪ್ರಯತ್ನ ಸಾಗಿದೆ. ಇದು ಏನಾದರು ಯಶಸ್ವಿಯಾದರೆ ಮಾನವನಿಗೆ ಮರುಹುಟ್ಟು ನೀಡಲು ಸಾಧ್ಯವಾಗದೇ ಹೋದರೂ ಸಾವವನ್ನು ಸ್ವಲ್ಪದಿನದ ಮಟ್ಟಿಗೆ ಮುಂದೂಡಲು ಸಾಧ್ಯವಾಗಬಹುದು.