ಜೀವನಯಾನ

Friday, June 28, 2013

ಜೀವ ವೈವಿಧ್ಯದ ಪಶ್ಚಿಮ ಘಟ್ಟ

ಜಗತ್ತಿನ ಅತಿದೊಡ್ಡ ಪರ್ವತ ಶ್ರೇಣಿ ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು. ದಕ್ಷಿಣ ಭಾರತದ ಉತ್ತರ-ದಕ್ಷಿಣವಾಗಿ 1600 ಕಿ.ಮೀ. ಹಬ್ಬಿರುವ ಭವ್ಯ ಹಾಗೂ ವಿಹಂಗಮ ಪರ್ವತ ಶ್ರೇಣಿ. ದಖ್ಖನ್ ಫೀಠಭೂಮಿಯ ಪಶ್ಚಿಮ ಅಂಚಿನ ಉದ್ದಕ್ಕೂ ಹಬ್ಬಿರುವ ಇವು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡನ್ನು ವ್ಯಾಪಿಸಿಕೊಂಡಿವೆ. ಒಟ್ಟು ಪರ್ವತ ಶ್ರೇಣಿಯ ಅರ್ಧಕ್ಕಿಂತಲೂ ಹೆಚ್ಚುಭಾಗ ಕರ್ನಾಟಕದಲ್ಲಿಯೇ ಇದೆ ಎನ್ನುವುದು ವಿಶೇಷ.



ಮಳೆ ಸುರಿಸುವ ಕಾಡು:

ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟಗಳೂ ಒಂದು. ಪಶ್ಚಿಮ ಘಟ್ಟದ ಕಾಡುಗಳು ದಕ್ಷಿಣ ಭಾರತಕ್ಕೆ ಮಳೆ ನೀಡುವ ಕಾಡು ಎಂದೇ ಪರಿಗಣಿಸಲ್ಪಟ್ಟಿದೆ. ಜೂನ್ನಿಂದ ಸೆಪ್ಟೆಂಬರ್ವರೆಗಿನ ಮಳೆಗಾಲದಲ್ಲಿ 3000ದಿಂದ 4000 ಮಿಲಿಮೀಟರ್ ಸರಾಸರಿ ಮಳೆ ಬೀಳುತ್ತದೆ. 1200 ಮೀಟರ್ ಎತ್ತರದ ಪಶ್ಚಿಮ ಘಟ್ಟವು ಮಳೆ ಉಂಟುಮಾಡುವ ಮಾರುತಗಳನ್ನು ತಡೆಯುವುದರಿಂದ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಪ್ರದೇಶವೆನಿಸಿದೆ. ನೈಋತ್ಯ ಮುಂಗಾರು ಘಟ್ಟಗಳು ಮತ್ತು ಅವುಗಳ ಪಶ್ಚಿಮ ಅಂಚಿನ ಪ್ರದೇಶದಲ್ಲಿ ಭಾರೀ ಮಳೆ ಸುರಿಸುತ್ತದೆ. ಈ ಪ್ರಕ್ರಿಯೆಯಿಂದಾಗಿ ಪಶ್ಚಿಮಘಟ್ಟ ಸದಾ ಹಸಿರಿನಿಂದ ಕೂಡಿರುತ್ತದೆ. ದೇಶದ ಹವಾಮಾನವನ್ನು ಸುಸ್ಥಿತಿಯಲ್ಲಿಡಲು ಪಶ್ಚಿಮ ಘಟ್ಟ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅನೇಕ ಗಿಡ ಮೂಲಿಕೆ ಮತ್ತು ಔಷಧಿಯ ಸಸ್ಯಗಳಿಗೂ ಪಶ್ಚಿಮ ಘಟ್ಟ ಹೆಸರುವಾಸಿ.  


ಕೊಂಕಣ, ಕೆನರಾ, ಮಲಬಾರ್:
ಅರಬ್ಬೀ ಸಮುದ್ರಕ್ಕೆ ಚಾಚಿಕೊಂಡಿರುವ ಕರಾವಳಿಯ ಉತ್ತರ ಭಾಗದ ಗೋವಾ ಮತ್ತು ಕಾರವಾರ ಕೊಂಕಣ ಪ್ರದೇಶವೆಂದು ಪ್ರಸಿದ್ಧಿ ಪಡೆದಿದೆ. ಮಧ್ಯದಭಾಗ ಕೆನರಾ ಮತ್ತು ದಕ್ಷಿಣ ಭಾಗವು ಮಲಬಾರ್ ಪ್ರಾಂತವೆಂದು ಕರೆಯಲ್ಪಟ್ಟಿದೆ.

ನದಿ, ಜಲಪಾತಗಳ ಆಗರ:
ಕಾವೇರಿ, ಕೃಷ್ಣಾ, ಗೋದಾವರಿ, ತಾಮ್ರಪರ್ಣಿ ದೊಡ್ಡ ನದಿಗಳೆನಿಸಿದ್ದು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.  ಪಶ್ಚಿಮಕ್ಕೆ ಹರಿಯುವ ನದಿಗಳು ಉದ್ದದಲ್ಲಿ ಕಡಿಮೆಯಾಗಿದ್ದು, ರಭಸವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಶರಾವತಿ, ನೇತ್ರಾವತಿ, ಮಾಂಡವಿ, ಜುವಾರಿ, ಅಘನಾಶಿನಿ ಇತ್ಯಾದಿ. ಈ ನದಿಗಳು ವಿದ್ಯುತ್ ಯೋಜನೆಗಳಿಗೆ ನೆಲೆಯಾಗಿವೆ. ಇವುಗಳಿಗೆ ಅಡ್ಡವಾಗಿ ಕೊಯ್ನಾ, ಲಿಂಗನಮಕ್ಕಿ, ಪರಂಬಿಕುಲಂ, ಕೊಪೋಲಿ ಅಣೇಕಟ್ಟುಗಳನ್ನು ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುವ ಭಾರೀ ಮಳೆಯು ಜೋಗ, ಶಿವನ ಸಮುದ್ರ, ಉಂಚಳ್ಳಿ ಕುಂಚಿಕಲ್ ಮುಂತಾದ ವಿಶ್ವಪ್ರಸಿದ್ಧಿ ಜಲಪಾತಗಳನ್ನು ಸೃಷ್ಟಿಸಿವೆ.

ಗಿರಿ ಕಂದರಗಳ ಒಡಲು:

ಕೆಮ್ಮಣ್ಣುಗುಂಡಿ,  ಕೊಡಚಾದ್ರಿ, ಕುದುರೆಮುಖ, ಮಹಾಬಲೇಶ್ವರ, ಸೋನ್ ಸಾಗರ್, ಮುಳ್ಳಯ್ಯನಗಿರಿ, ಆನೈಮುಡಿ ಮುಂತಾದ ಗಿರಿಶಿಖರಗಳನ್ನು ಪಶ್ಚಿಮ ಘಟ್ಟ ತನ್ನ ಸೌಂದರ್ಯದ ಒಡಲಲ್ಲಿ ತುಂಬಿಕೊಂಡಿದೆ. ಊಟಿ, ಕೊಡೈಕೆನಾಲ್, ಬೆರಿಜಂ ಮುಂತಾದ ತಂಪನೆಯ ಪ್ರದೇಶಗಳಿಗೆ ಹೆಸರು ಪಡೆದಿದೆ.

ಅಪರೂಪದ ಪ್ರಾಣಿ ಸಂಕುಲ:

ಪಶ್ಚಿಮ ಘಟ್ಟ ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು, ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ 325 ತಳಿಯ ಪ್ರಾಣಿಗಳನ್ನು ಹೊಂದಿದೆ. 120 ಪ್ರಜಾತಿಗಳಿಗೆ ಸೇರಿದ ಸ್ತನಿ ಪ್ರಾಣಿಗಳಿಗೆ ಪಶ್ಚಿಮ ಘಟ್ಟ ತವರು. ಅವುಗಳಲ್ಲಿ 14 ಪ್ರಾಣಿಗಳು ಕೇವಲ ಇಲ್ಲಿ ಮಾತ್ರವೇ ಕಂಡುಬರುತ್ತದೆ. ಸಲೀಂ ಅಲಿ ಹಣ್ಣುಗಳ ಬಾವಲಿ,  ವ್ರಾಟನ್ಸ್ ಫ್ರೀ ಟೇಲ್ಡ್ ಬಾವಲಿ, ಸಿಂಹ ಬಾಲದ ಸಿಂಗಳೀಕ, ಕಪ್ಪು ಮುಖದ ಲಂಗೂರ, ಮಲಬಾರ್ ಪುನುಗು ಬೆಕ್ಕು, ರಂಜಿನಿ ಹೆಗ್ಗಣ, ಮಲಬಾರ್ ಬಕ, ಮಡ್ರಾಸ್ ಹೆಡ್ಗೆಹಾಗ್ ಉದಾಹರಣೆ ನೀಡಬಹುದಾದ ಕೆಲ ಪ್ರಜಾತಿಗಳು.

ವಿಶ್ವ ಪರಂಪರೆಯ ತಾಣ:
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಪ್ರಾಣಿಗಳು ಅರಣ್ಯನಾಶದಿಂದಾಗಿ ಮತ್ತು ಮಳೆಯ ಕೊರತೆಯಿಂದಾಗಿ ವಿನಾಶದ ಅಂಚು ತಲುಪಿವೆ.  ಒಂದು ಕಾಲದಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಪ್ರಾಣಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಕುಸಿಯುತ್ತಿದೆ. ಇದನ್ನು ತಪ್ಪಿಸುವ ಸಂಬಂಧ. ಜುಲೈ 1, 2012ರಂದು ಈ  ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೊ ಘೋಷಣೆ ಮಾಡಿದೆ. 



 

Tuesday, June 18, 2013

ಮಾನಸ ಸರೋವರ

ಮಾನಸ ಸರೋವರ ಭಾರತ-ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಈ ಪ್ರದೇಶ ಚೀನಾದ ಸ್ವಾಯತ್ತ ಟಿಬೇಟ್ನ ಹಿಡಿತಕ್ಕೆ ಒಳಪಟ್ಟಿದೆ. ಇದು ಸಮುದ್ರ ಮಟ್ಟದಿಂದ 14950 ಅಡಿ ಉತ್ತರದಲ್ಲಿದೆ. ಜಗತ್ತಿನಲ್ಲಿಯೇ ಅತ್ಯಂತ ಶುದ್ಧ ನೀರಿಗೆ ಮಾನಸ ಸರೋವರ ವಿಖ್ಯಾತಿ ಪಡೆದಿದೆ. ಮಾನಸ ಸರೊವರ ಹಿಂದುಗಳ ಪವಿತ್ರ ನದಿ. ಇಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬುದು ನಂಬಿಕೆ. ಪುರಾಣಕ್ಕಿಂತಲೂ ಹೆಚ್ಚಾಗಿ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಮಾನಸ ಸರೋವರ ಪ್ರಸಿದ್ಧಿ.
 


ಯಾತ್ರಾರ್ಥಿಗಳ ಸ್ವರ್ಗ!
ಬ್ರಹ್ಮಪುತ್ರ, ಸಿಂಧು, ಗಂಗಾ, ಸಟ್ಲೆಜ್ ಈ ನಾಲ್ಕು ನದಿಗಳ ಉಗಮ ಸ್ಥಾನವೆನಿಸಿಕೊಂಡಿರುವುದು ಈ ಸರೋವರದ ಹೆಗ್ಗಳಿಕೆ. ಅಲ್ಲದೆ ಇದೊಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಪ್ರತಿವರ್ಷ ಲಕ್ಷಾಂತರ ಚಾರಣಿಗರು, ಸಾಹಸಿಗರು, ಧಾರ್ಮಿಕ ವ್ಯಕ್ತಿಗಳು ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಾರೆ. ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮತ್ತು ನೀರನ್ನು ಕುಡಿಯುವುದರಿಂದ ನಮ್ಮ ಪಾಪವೆಲ್ಲವೂ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಯಾತ್ರಾಥರ್ಿಗಳ ಸ್ವರ್ಗ ಎಂದೇ ಇದನ್ನು ಕರೆಯಲಾಗುತ್ತದೆ.

ಸರೋವರದ ವಿಶೇಷತೆ:

ಈ ಸರೋವರ ಸುಮಾರು 88 ಕಿ.ಮೀ. ಸುತ್ತಳತೆ ಮತ್ತು 90 ಮೀಟರ್  ಆಳವಾಗಿದೆ.  ಚಳಿಗಾಲದಲ್ಲಿ ಇದರ ಮೇಲೈ ಸಂಪೂರ್ಣವಾಗಿ ಹೆಪ್ಪು ಗಟ್ಟಿರುತ್ತದೆ. ಹಿಂದು ಪುರಾಣಗಳ ಪ್ರಕಾರ ಮಾನಸ ಸರೋವರ ಶಿವನ ಆವಾಸ ಸ್ಥಾನ ಎನ್ನುವ ಪ್ರತೀತಿ ಇದೆ. ಅಲ್ಲದೆ ಬೌದ್ಧ ಧರ್ಮೀಯರೂ ಮಾನಸ ಸರೋವರದೊಂದಿಗೆ ಪವಿತ್ರ ಸಂಬಂಧ ಹೊಂದಿದ್ದಾರೆ.

 ಕೈಲಾಸ ಮಾನಸ ಸರೋವರ ಯಾತ್ರೆ:
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ (ಹಿಮ ಕಡಿಮೆ  ಇರುವ ತಿಂಗಳನ್ನು ಪರಿಗಣಿಸಿ) ಭಾರತ ಸರ್ಕಾರ "ಕೈಲಾಸ ಮಾನಸ ಸರೋವರ ಯಾತ್ರೆ"  ಆಯೋಜಿಸುತ್ತದೆ. ಇದು ನಾವಿಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತ ವಿದೇಶಾಂಗ ಸಚಿವಾಲಯ "ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್" (ಐ.ಟಿ.ಬಿ.ಪಿ.) ನೇತೃತ್ವದಲ್ಲಿ ಈ ಯಾತ್ರೆ ನೆರವೇರಿಸಲಾಗುತ್ತದೆ. ಯಾತ್ರೆ ಕೈಗೊಳ್ಳುವವರು ಐ.ಟಿ.ಬಿ.ಪಿ. ಯಿಂದ ಪರೀಕ್ಷೆ ಎದುರಿಸಬೇಕು. ಯಾತ್ರಿಕರ ದೈಹಿಕ ಮಾನಸಿಕ ದೃಢತೆ ಮತ್ತು ಸಾಮಥ್ರ್ಯವನ್ನು ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ 38 ದಿನಗಳು. ಯಾತ್ರೆಗೆ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದೊಂದಿಗೆ ಯಾತ್ರಾಥರ್ಿಗಳ ಜತೆ ಭದ್ರತಾ ಸಿಬ್ಬಂದಿ ನುರಿತ ವೈದ್ಯರು ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎನ್ನುವ ವಿವರವನ್ನು ಕನಿಷ್ಠ 6 ತಿಂಗಳ ಮೊದಲೇ ತಿಳಿಸಲಾಗುತ್ತದೆ. ಯಾತ್ರೆಗೆ ಉಣ್ಣೆಯ ಕವಚ, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ವಾಟರ್ ಪ್ರೂಫ್ ಶೂ, ಆಕ್ಸಿಜನ್ ಸಿಲಿಂಡರ್, ನಾಡಿ ಮಿಡಿತ ಪರೀಕ್ಷಿಸುವ ಪಲ್ಸ್ ಮೀಟರ್ ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಹೊತ್ತೊಯ್ಯಬೇಕು.

ಚೀನಾ ತಕರಾರು: 
ಚೀನಾದ ಸೈನ್ಯ ಟಿಬೇಟನ್ನು ಆಕ್ರಮಿಸಿಸಿಕೊಂಡಿದ್ದರ ಪರಿಣಾಮವಾಗಿ 1949ರಿಂದ 1980ರವರೆಗೆ ವಿದೇಶಿ ಪ್ರವಾಸಿಗರು ಮಾನಸ ಸರೋವರಕ್ಕೆ ಭೇಟಿ ನೀಡುವುದಕ್ಕೆ ನಿಷೇಧ ಹೇರಲಾಗಿತ್ತು. ಬಳಿಕ ಭಾರತೀಯ ಪ್ರವಾಸಿಗರಿಗೆ ಮಾನಸ ಸರೋವರಕ್ಕೆ ತೆರಳಲು ಮುಕ್ತ ಅವಕಾಶ ಕಲ್ಪಿಸಲಾಯಿತು. ಈಗಲೂ ಭಾರತೀಯ ಯಾತ್ರಿಕರಿಗೆ ಚೀನಾದ ತಕರಾರು ಇದ್ದಿದ್ದೇ.

ದುರ್ಗಮ ಹಾದಿ:

ಮಾನಸ ಸರೋವರಕ್ಕೆ ತಲುಪಬೇಕೆಂದರೆ 52 ಕೀ. ಕೈಲಾಸ ಪರ್ವತದ ದುರ್ಗಮ ದಾರಿ ಕ್ರಮಿಸಬೇಕು. ಈ ಯಾತ್ರೆ ಉಳಿದ ಯಾತ್ರೆಯಷ್ಟು ಸುಲಭವಲ್ಲ. ದಿನಕ್ಕೆ ಕನಿಷ್ಠ 10 ಕಿ.ಮೀ. ನಡೆಯುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಇಷ್ಟೆಲ್ಲಾ ಸಾಹಸದ ಬಳಿಕ  ಮಾನಸ ಸರೋವರ ತಲುಪಿದ ಬಳಿಕ ಸ್ವರ್ಗವನ್ನೇ ಮುಟ್ಟಿದ ಹಿತಾನುಭವವಾಗುತ್ತದೆ. 2 ರಿಂದ 3ದಿನ ಇಲ್ಲಿ ಉಳಿಯಲು ಅವಕಾಶ ನೀಡಲಾಗತ್ತದೆ. ಸರೋವರದ ಎದುರಿನಲ್ಲಿ ಹಿಮದಿಂದ ಆವೃತವಾದ ಕೈಲಾಸ ಪರ್ವತದ ದರ್ಶನವಾಗುತ್ತದೆ. ತೀರದ ಸುತ್ತಲೂ ಅನೇಕ ದೇವಾಲಯಗಳಿವೆ. 

  



 

Sunday, June 9, 2013

ಪ್ಯಾರಿಸ್ ನ ಐಫೆಲ್ ಗೋಪುರ

ಪ್ಯಾರಿಸ್ ನಗರದ ಹೆಗ್ಗುರುತಾಗಿ ಕಳೆದ ನೂರಾರು ವರ್ಷಗಳಿಂದ ಐಫೆಲ್ ಗೋಪುರ ತಲೆಎತ್ತಿ ನಿಂತಿದೆ. 1889ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಐಫೆಲ್ ಗೋಪುರ ನಿರ್ಮಾಣ ಮಾಡಲಾಗಿದೆ. ಇದು ಯುರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಹೌದು. ನಗರದ ಮಧ್ಯೆ ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಿರುವ ಈ ಗೋಪುರ ಪ್ಯಾರಿಸ್ನ ಎಲ್ಲೇ ನಿಂತು ನೋಡಿದರೂ ಕಾಣಸಿಗುತ್ತದೆ. ಸಂಪೂರ್ಣ ಕಬ್ಬಿಣದಿಂದಲೇ ಮಾಡಲ್ಪಟ್ಟಿರುವುದು
ಈ ಗೋಪುರದ ವಿಶೇಷತೆ.
 

ಶತಮಾನೋತ್ಸವ:
ಫ್ರಾನ್ಸ್ ಮಹಾಕ್ರಾಂತಿಯ ಶತಮಾನೋತ್ಸವದ ಸಂಭ್ರಮಾಚರಣೆಗಾಗಿ ನಡೆದ ವಸ್ತುವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಡರ್ ಗುಸ್ತಾವ್ ಐಫೆಲ್ ನಿರ್ಮಿಸಿದ ವಿನ್ಯಾಸದ ಮಾದರಿ ಬಹುಮಾನ ಗಳಿಸಿತ್ತು. ಹೀಗಾಗಿ ವಿನ್ಯಾಸಕರ್ತ ಗುಸ್ತಾವ್ ಐಪೆಲ್ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಗಿದೆ. ನ್ಯೂಯಾರ್ಕ್ ನಲ್ಲಿರುವ ಲಿಬರ್ಟಿ ಪ್ರತಿಮೆಯ ನಿಮಾತೃನೂ  ಈತನೇ ಆಗಿದ್ದಾನೆ. ಇವೆರಡೂ ಶತಮಾನೋತ್ಸವ ಆಚರಿಸಿವೆ.
ಐಫೆಲ್ ಗೋಪುರ 324 ಮೀಟರ್ (1064 ಅಡಿ) ಎತ್ತರವಿದೆ. ಗೋಪುರದ ಮೇಲೆ 20.25 ಮೀಟರ್ ಉದ್ದದ ಟೀವಿ ಟ್ರಾನ್ಸ್ ಮೀಟರ್ ಅಳವಡಿಸಲಾಗಿದೆ. ಅಂದರೆ ಈ ಗೋಪುರ 81 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿ ನಿಲ್ಲುತ್ತದೆ. ಇದರ ಒಟ್ಟು ತೂಕ 10 ಸಾವಿರ ಟನ್ನಷ್ಟಿದ್ದು, 7,500 ಟನ್ ಕಬ್ಬಿಣ ಬಳಕೆ ಮಾಡಲಾಗಿದೆ. 1887 ಜನವರಿ 26ರಂದು ಐಫೆಲ್ ಗೋಪುರ ನಿರ್ಮಾಣ ಕಾರ್ಯ ಆರಂಭವಾಯಿತು. ಇದನ್ನು ಕಟ್ಟಿ ಮುಗಿಸಲು 2 ವರ್ಷ ಆರು ತಿಂಗಳು ಬೇಕಾಯಿತು. ಅನೇಕ ವರ್ಷಗಳ ಕಾಲ ಇದು  ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.

ಮೂರು ವೀಕ್ಷಣಾ ಅಂತಸ್ತು:
ನಾಲ್ಕು ಕಡೆ ಭಾರೀ ಕಮಾನಿನಾಕಾರದ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕುಕಡೆ ಜನರು ನಿಂತು ಪ್ಯಾರಿಸ್ ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ನೆಲದಿಂದ 57 ಮೀಟರ್ ಎತ್ತರದಲ್ಲಿ ಮೊದಲ ಅಂತಸ್ತಿದೆ. 115 ಮೀ. ಎತ್ತರದಲ್ಲಿ ಎರಡನೇ ಅಂತಸ್ತು ಮತ್ತು 247 ಮೀಟರ್ ಎತ್ತರದಲ್ಲಿ ಮೂರನೇ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೆರುತ್ತಾ ಹೋದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಲೆ 63 ಜನರನ್ನು ಒಯ್ಯಬಲ್ಲ ಮೂರು ಲಿಫ್ಟುಗಳಿವೆ. ಹತ್ತುಹೋಗಬೇಕೆಂದರೆ 1269 ಮೆಟ್ಟಿಲುಗಳನ್ನು ಹತ್ತಬೇಕು. ನಿರ್ಮಾಣ ಸಮಯದಲ್ಲಿ 20 ವರ್ಷಗಳ ನಂತರ ಗೋಪುರವನ್ನು ಕಳಚಿಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ ಮೊದಲನೇ ಮಹಾಯುದ್ಧ ಆರಂಭವಾಯಿತು. ಇದರಿಂದ ಐಫೆಲ್ ಗೋಪುರ ಮಿಲಿಟರಿ ಸಂಪರ್ಕ ಕೇಂದ್ರವಾಗಿ ಸಹಾಯಕವಾಯಿತು ಹೀಗಾಗಿ ಅದನ್ನು ಕಳಚಿಹಾಕುವ ಪ್ರಶ್ನೆಯೇ ಬರಲಿಲ್ಲ. ಬಳಿಕ ನೂರಕ್ಕೂ ಹೆಚ್ಚು ವರ್ಷಗಳ ಕಾಲ ತಲೆಎತ್ತಿನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.


ರಾಷ್ಟ್ರೀಯ ಸ್ಮಾರಕ:
1967ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಫ್ರೆಂಚರಿಗೆ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ನಲ್ಲಿ ನಡೆಯುವ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ದೀಪಾಲಂಕಾರಗೊಂಡ ರಾತ್ರಿ ಸುಮಾರು 40 ಕಿ.ಮೀ.ಆಚೆಗೂ ಇದರ ಬೆಳಕು ಪಸರಿಸುತ್ತಾ ಚಿನ್ನದ ಆಕಾರದಲ್ಲಿ ಹೊಳೆಯುತ್ತದೆ. ಪ್ರತಿ 7 ವರ್ಷಕ್ಕೊಮ್ಮೆ ಗೋಪುರಕ್ಕೆ ಬಣ್ಣ ಬಳಿಯಲಾಗುತ್ತದೆ. ಇದಕ್ಕಾಗಿ 50 ಟನ್ ಬಣ್ಣ ಬೇಕಾಗುತ್ತದೆ.

ಪ್ರಸಿದ್ಧ ಪ್ರವಾಸಿತಾಣ: 
ಐಫೆಲ್ ಗೋಪುರ ವಿಶ್ವದಲ್ಲಿಯೇ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ  ಒಂದೆನಿಸಿದೆ. ಲಕ್ಷಾಂತರ ಪ್ರವಾಸಿಗರು ಇದರ ವೀಕ್ಷಣೆಗೆ ಆಗಮಿಸುತ್ತಾರೆ. ಇದುವರೆಗೆ ಸುಮಾರು ಒಂದು ಕೋಟಿಗೂ ಅಧಿಕ ಪ್ರವಾಸಿಗರು ಈ ಗೋಪುರವನ್ನು ವೀಕ್ಷಿಸಿದ್ದಾರೆ.

Thursday, June 6, 2013

ಈಜಿಪ್ಟ್ ನ ಭವ್ಯ ಪಿರಮಿಡಗಳು

ಎಲ್ಲರೂ ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ ಗೆ ಅಂಜುತ್ತದೆ ಎನ್ನುವ ಗಾದೆ ಮಾತಿದೆ. ಕಳೆದ ಸುಮಾರು  5000 ವರ್ಷಗಳಿಂದ ಪ್ರಕೃತಿಯ ಎಲ್ಲ ರೀತಿಯ ಪ್ರಕೋಪಗಳನ್ನು ಸಹಿಸಿಕೊಂಡು ನಿಂತಿರುವ ಈ ಭವ್ಯ ಗೋಪುರಗಳು ಅಂದಿನ ಕಾಲದ ಚಕ್ರರ್ತಿಗಳ, ಸಾಮ್ರಾಜ್ಯಶಾಹಿಗಳ ಸಮಾಧಿಗಳಾಗಿವೆ. ಕ್ರಿ.ಪೂ. 2630 ರಿಂದ ಕ್ರಿ.ಪೂ. 1530ರ ಅವಧಿಯಲ್ಲಿ ಈ ಸ್ಮಾರಕಗಳು ನಿಮರ್ಮಾಣಗೊಂಡಿವೆ ಎಂದು ಹೇಳಲಾಗಿದೆ. ಇದರ ಚೌಕಾಕಾರದ ತಳ, ತ್ರಿಕೋಣಾಕಾರದ ಪಾಶ್ರ್ವಗಳು ಮೇಲಕ್ಕೆ ಹೋದಂತೆ ಕಿರಿದಾಗುತ್ತಾಹೋಗಿ ಒಂದುಗೂಡಿ ಪಿರಮಿಡ್ ಗಳಾಗಿವೆ. 



ಈಜಿಪ್ಟ್ ಪಿರಮಿಡ್ ಇತಿಹಾಸ:

ಈಜಿಪ್ಟ್ ಪಿರಮಿಡ್ಗಳ ನಗರ ಎಂದು ಹೆಸರಾಗಿದೆ. ಈಜಿಪ್ಟನಲ್ಲಿ ಸುಮಾರು 138 ಪಿರಮಿಡ್ ಗಳನ್ನು ಸಂಶೊಧಿಸಲಾಗಿದೆ. ಸಕ್ಕಾರದಲ್ಲಿರುವ ಮೆಟ್ಟಿಲಿನ ಪಿರಮಿಡ್ ಅತ್ಯಂತ ಪುರಾತನವೆನಿಸಿದ್ದು, ಕ್ರಿ. ಪೂ.2650ರಲ್ಲಿ ಇದು ನಿಮರ್ಮಾ ಣಗೊಂಡಿರಬಹುದೆಂದು ಹೇಳಲಾಗಿದೆ. ಸಕ್ಕಾರ್ ಪಿರಮಿಡ್ 62 ಮೀ. ಎತ್ತರವಿದೆ. ಎಲ್-ಗಿಜಾ ಎಂಬ ಪ್ರದೇಶದ ಸಮೀಪ ಅತ್ಯಂತ ಪ್ರಸಿದ್ಧವಾದ ಹಾಗೂ ಮೂರು ಪಿರಮಿಡ್ ಗಳಿವೆ. ಗೀಜಾ ಪಿರಮಿಡ್ಗಳು ಈಜಿಪ್ಟಿನ ಫ್ಲಾರೋ ದೊರೆಗಳ ಭವ್ಯತೆ ಮತ್ತು ಶಕ್ತಿ ಸಾಹಸಗಳ ಕುರುಹುಗಳೆಂದು ಪರಿಗಣಿಸಲಾಗಿದೆ. ಕ್ರಿ.ಪೂ. 2590ರಲ್ಲಿ ನಿಮರ್ಮಾಣಗೊಂಡ ಖುಫು ಪಿರಮಿಡ್ ಪುರಾತನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಒಟ್ಟು 12 ಎಕರೆ ವಿಸ್ತೀರ್ಣವಿರುವ ಇದು ನಿರ್ಮಾಣಗೊಂಡಾಗ 147 ಮೀಟರ್ ಎತ್ತರವಿತ್ತು. ಆ ರಾಜನ ತರುವಾಯ ಪಟ್ಟಕ್ಕೆ ಬಂದ ಆತನ ಮಗ ಅದರ ಸಮೀಪದಲ್ಲಿಯೇ ತನಗಾಗಿ ಇನ್ನೊಂದು ಪಿರಮಿಡ್ ನಿರ್ಮಿಸಿಕೊಂಡ. ಅದರ ಎತ್ತರ 136 ಮೀ. ಮುಂದೆ ಪಟ್ಟಕ್ಕೆ ಬಂದ ರಾಜನೂ ಅಲ್ಲಿಯೇ 73 ಮೀ. ಎತ್ತರದ ಇನ್ನೊಂದು ಪಿರಮಿಡ್ ನಿಮರ್ಮಿಸಿಕೊಂಡ.

ನಿಮರ್ಮಾಣಗೊಂಡಿದ್ದು ಯಾಕೆ?

ರಾಜ ಅಥವಾ ರಾಣಿ ಸಾವಿಗೀಡಾದರೆ ಅವರ ದೇಹವನ್ನು  ಕೆಡದಂತೆ ಸಂರಕ್ಷಿಸುವುದು ಈಜಿಪ್ಟ್ನ ಸಂಪ್ರದಾಯವಾಗಿತ್ತು. ರಾಜ ಮತ್ತು ರಾಣಿಯರ ಮೃತದೇಹಗಳನ್ನು ಇಡುವ ಸಮಾಧಿಯಾಗಿ ಈ ಪಿರಮಿಡ್ಗಳನ್ನು  ನಿರ್ಮಿಸಲಾಗಿದೆ. ಮೃತ ಸಾಮ್ರಾಜ್ಯಶಾಹಿಗಳ ಆತ್ಮವನ್ನು ಪೋಷಿಸುವ ಸಲುವಾಗಿ ಪೂಜಾರಿಗಳು ಕ್ರಿಯಾವಿಧಿಗಳನ್ನು ಪೂರೈಸುತ್ತಿದ್ದರು. ಹೀಗೆ ಮಾಡುವುದರಿಂದ ಆತ್ಮ ದೇಹವನ್ನು ಬಿಟ್ಟುಹೋಗುವುದಿಲ್ಲ ಎಂದು ನಂಬಲಾಗಿತ್ತು. 


ಪಿರಮಿಡ್ ಕಟ್ಟಿದ್ದು ಹೇಗೆ?
ರಾಜರು ದೃಢಕಾಯರಾಗಿದ್ದಾಗಲೇ ಅವರಿಗಾಗಿ ಪಿರಮಿಡ್ ನಿರ್ಮಾಣ ಪ್ರಾರಂಭವಾಗುತ್ತಿತ್ತು. ಪಿರಮಿಡ್ ಗಳಿಗೆ ಬಳಸಲಾಗಿರುವ ಸಣ್ಣಕಲ್ಲು ಮತ್ತು ಬೆಣಚುಕಲ್ಲಿನ ದಿಂಡುಗಳು ಪ್ರತಿಯೊಂದು ಮೂರರಿಂದ 15 ಟನ್ ಭಾರದವು. ಇಷ್ಟು ಭಾರದ ದಿಂಡುಕಲ್ಲುಗಳನ್ನು ಬಹಳ ದೂರದ ಕಲ್ಲುಗಣಿಯಿಂದ ನೈಲ್ ನದಿಯಲ್ಲಿ ಸಾಗಿಸಿತಂದು ಪಿರಮಿಡ್ ನಿರ್ಮಾಣ ಸ್ಥಳಕ್ಕೆ ಗಾಡಿಗಳ ಮೂಲಕ ಸಾಗಿಸಿರಬಹುದೆಂದು ಹೇಳಲಾಗಿದೆ. ಈ ಬ್ರಹತ್ ಪಿರಮಿಡ್ ಗಳನ್ನು ನಿರ್ಮಿಸಲು ಎಷ್ಟು ವರ್ಷ  ತೆಗೆದುಕೊಂಡಿರಬಹುದು. ಅಷ್ಟೊಂದು ಭಾರದ ಕಲ್ಲುಗಳನ್ನು ಹೇಗೆ ಮೇಲಕ್ಕೆ ಎತ್ತಿದರು ಎನ್ನುವುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಪಿರಮಿಡ್ ನ ಒಳರಚನೆ: 

ಇವುಗಳ ಒಳರಚನೆ ಅತ್ಯಂತ ಸಂಕೀರ್ಣವಾಗಿದೆ. ಪಿರಮಿಡ್ ನ ಉತ್ತರ ದಿಕ್ಕಿನ ಮಧ್ಯಭಾಗದಲ್ಲಿ ಪ್ರವೇಶದ್ವಾರವಿರುತ್ತದೆ. ಅಲ್ಲಿಂದ ಒಳಗೆ ಹೋಗಲು ಅನೇಕ ದಾರಿಗಳಿದ್ದು, ಒಂದು ದಾರಿ ರಾಜನ ಪ್ರಧಾನ ಸಮಾಧಿ ಕೋಣೆಗೆ ಸಂಪರ್ಕ ಕಲ್ಪಿಸುತ್ತದೆ. ರಾಜನ ಸಮಾಧಿಕೋಣೆ ಪಿರಮಿಡ್ ನ ಕೇಂದ್ರ ಬಿಂದುವಿನ ತಳಭಾಗದಲ್ಲಿ ನಿರ್ಮಾಣಗೊಂಡಿರುತ್ತದೆ. ಇದಲ್ಲದೆ ಪಿರಮಿಡ್ ರಾಣಿಯ ಸಮಾಧಿ ಮತ್ತು ಪೂಜಾ ಸಾಮಗ್ರಿಗಳನ್ನು ಇರಿಸುವ ಕೋಣೆ, ವಿಶಾಲವಾದ ಮಂಟಪಗಳನ್ನು ಒಳಗೊಂಡಿದ್ದು, ಇವುಗಳನ್ನು  ತಲುಪಲು ಪ್ರತ್ಯೇಕ ದಾರಿಗಳಿವೆ. ಕೋಣೆಗಳ ಒಳಗೆ ಸ್ಥಂಬಗಳು, ಗೋಡೆಗಳ ಮೇಲೆ ವರ್ಣ  ಚಿತ್ರಗಳು ಪುರಾತನ ಚಿತ್ರಲಿಪಿಯಲ್ಲಿರುವ ಸೂಚನೆ ಸಂಕೇತಗಳು, ಭವ್ಯ ವಿಗ್ರಹಗಳನ್ನು ಇರಿಸಲಾಗಿದೆ. ಇಲ್ಲಿನ ವಸ್ತುಗಳನ್ನು ಯಾರೂ ಕದಿಯದಂತೆ ಮಾರ್ಗದ ಮಧ್ಯೆ ತಡೆಗಳನ್ನು  ಇರಿಸಲಾಗಿದೆ. ಪಿರಮಿಡ್ ಇಷ್ಟೊಂದು ಸುರಕ್ಷಿತವಾಗಿದ್ದರೂ, ಕಳ್ಳರು ಇಲ್ಲಿನ ಅಮೂಲ್ಯ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.