ಜೀವನಯಾನ

Tuesday, September 24, 2013

ನೀರನ್ನೇ ಕುಡಿಯದ ಕಾಂಗರೂ ಇಲಿ!

ಪ್ರಾಣಿಗಳೆಂದರೆ ಅವು ನೀರನ್ನು ಅಗಲಿ ಬದುಕುವುದು ಸಾಧ್ಯವೇ ಇಲ್ಲ. ಆದರೆ, ಜೀವಿತಾವಧಿಯಲ್ಲಿ ಒಮ್ಮೆಯೂ ನೀರನ್ನು ಕುಡಿಯದ ಪ್ರಾಣಿಯೊಂದಿದೆ. ಅದೇ ಕಾಂಗರೂ ಇಲಿ!  ಅಮೆರಿಕದ ಕ್ಯಾಲಿಫೋರ್ನಿಯಾ ಶುಶ್ಕ ಮರುಭೂಮಿಯಲ್ಲಿ ಇವು ಕಂಡುಬರುತ್ತವೆ. ಇದರ ಕಾಲು ಮತ್ತು ಬಾಲ ಆಸ್ಟ್ರೇಲಿಯಾದ ಕಾಂಗರೂಗಳನ್ನು ಹೋಲುತ್ತದೆ. ಅಲ್ಲದೆ ಇದು ಕಾಂಗರೂಗಳಂತೆ ನೆಗೆಯುತ್ತಾ ಓಡುತ್ತದೆ. ಹೀಗಾಗಿಯೇ ಇವುಗಳಿಗೆ ಕಾಂಗರೂ ಇಲಿ ಎನ್ನುವ ಹೆಸರು ಬಂದಿದೆ.


ನೀರನ್ನೇ ಕುಡಿಯುವುದಿಲ್ಲ!
ಕಾಂಗರೂ ಇಲಿಗಳು ಬಿಸಿಲಿನ ಮರುಭೂಮಿಯಲ್ಲಿ ವಾಸಿಸುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದುವ ದೇಹರಚನೆ ಹೊಂದಿವೆ. ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡಿವೆ. ಇವು ಜೀವಿತಾವಧಿಯಲ್ಲಿ ನೀರನ್ನು ಕುಡಿಯದಿದ್ದರೂ ಬದುಕುಳಿಯಬಲ್ಲದು! ಇವುಗಳ ಶ್ರವಣ ಸಾಮರ್ಥ್ಯ  ಅಗಾಧವಾಗಿದೆ. ಗೂಬೆ, ಹಾವುಗಳು ಸದ್ದಿಲ್ಲದೆ ದಾಳಿ ಮಾಡುವುದನ್ನು ಸಹ ತಿಳಿದುಕೊಳ್ಳುತ್ತದೆ. ಹಿಂಗಾಲು ಉದ್ದವಾಗಿದ್ದು, ವೈರಿಗಳಿಂದ ತಪ್ಪಿಸಿಕೊಳ್ಳಲು 9 ಅಡಿ ಉದ್ದದ ವರೆಗೆ ನೆಗೆಯಬಲ್ಲದು.

ನೆಲದೊಳಗೆ ಸುಸಜ್ಜಿತ ಮನೆ!

ಕಾಂಗರೂ ಇಲಿಗಳು  ಹೆಚ್ಚಾಗಿ  ಭೂಮಿಯ ಅಡಿಗಳಲ್ಲೇ ಹೆಚ್ಚಾಗಿ  ಇರುತ್ತವೆ. ಕುರುಚಲು ಪೊದೆ, ಹುಲ್ಲುಗಳಿರುವ ಬಯಲು ಪ್ರದೇಶ, ಮರಳು ಗುಡ್ಡೆ, ಮರದ ಪೊಟರೆ ಮುಂತಾದ ವೈವಿಧ್ಯಮಯ ಗೂಡುಗಳಲ್ಲಿ ವಾಸಿಸುತ್ತವೆ. ಬಿಲವನ್ನು  ನಾವು ವಾಸಿಸುವ ಮನೆಯಂತೆಯೇ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಿಕೊಂಡಿರುತ್ತದೆ. ಬಿಲದಲ್ಲಿ ಪ್ರತ್ಯೇಕ ಭೋಜನ ಕೋಣೆ, ಮಲಗುವ ಕೋಣೆ, ಆಹಾರ ಸಂಗ್ರಹ ಕೋಣೆಗಳನ್ನು ಹೊಂದಿರುತ್ತದೆ. ಸುಡುಬಿಸಿಲಿನ ಹಗಿನ ವೇಳೆಯಲ್ಲಿ ಬಿಲವನ್ನು ತಂಪಾಗಿರಿಸಲು ಬಿಲದ ಬಾಗಿಲನ್ನು ಮಣ್ಣಿನಿಂದ ಮುಚ್ಚಿಡುತ್ತದೆ. ರಾತ್ರಿ ಮರುಭೂಮಿ ತಂಪಾದಾಗ ಬಾಗಿಲನ್ನು  ತೆರೆಯುತ್ತದೆ. ದಿನದ ಬಹುತೇಕ ಸಮಯ ಬಿಲದಲ್ಲಿ ನಿದ್ರಿಸುವುದರಲ್ಲೇ ಕಳೆಯುತ್ತದೆ. ರಾತ್ರಿಯಹೊತ್ತು ವಾತಾವರಣ ತಣ್ಣಗಾದ ಬಳಿಕ ಆಹಾರ ಸೇವನೆಗಾಗಿ ಬಿಲದಿಂದ ಹೊರಗೆ ಬರುತ್ತವೆ. ಹವಾಮಾನ ವೈಪರೀತ್ಯಗಳು ಉಂಟಾದಾಗ ಬಿಲದಲ್ಲಿಯೇ ಇದ್ದುಬಿಡುತ್ತವೆ.

ಮೈ ಬೆವರುವುದೇ ಇಲ್ಲ!
ಕಾಂಗರೂ ಇಲಿ ಬೆವರಿನ ಮೂಲಕ ಬಿಡುಗಡೆಯಾಗುವ ತೇವಾಂಶವನ್ನು ಉಸಿರಿನ ಮೂಲಕ ಪುನಃ ಹೀರಿಕೊಳ್ಳುತ್ತದೆ. ಹೀಗಾಗಿ ಕಾಂಗರೂ ಇಲಿ ಬೆವರುವುದೇ ಇಲ್ಲ. ಅಲ್ಲದೆ ದೇಹದಿಂದ ಹೊರಹೋಗುವ ನೀರಿನ ಅಂಶ ವರ್ಥವಾಗುವುದಿಲ್ಲ. ದೇಹದಷ್ಟೇ ದೊಡ್ಡ ತಲೆ, ಅಗಲವಾದ ಕಣ್ಣು, ಚಿಕ್ಕಕಿವಿ. ಉದ್ದನೆ ಹಿಂಗಲು, ಪುಟ್ಟ ಮುಂಗಾಲು, ಉದ್ದನೆಯ ಬಾಲ ಇವು ಕಾಂಗರೂ ಸ್ಥೂಲ ದೇಹರಚನೆ. ಇದರ ದೇಹದ ಉದ್ದ 3 ರಿಂದ 5 ಇಂಚು. ಬಾಲ ದೇಹಕ್ಕಿಂತಲೂ ದೊಡ್ಡ ಅಂದರೆ, 5ರಿಂದ 6 ಇಂಚು ಉದ್ದವಿರುತ್ತದೆ. ಕಾಂಗರೂ ಇಲಿಯ ಮೈ ಮರಳಿನ ಕಂದು ಬಣ್ಣ ಮತ್ತು ಹೊಟ್ಟೆಯ ಭಾಗ ಬಿಳಿಯಾಗಿದೆ. ಜೀವಿತಾವಧಿ 2 ರಿಂದ 5 ವರ್ಷ. ಕಾಂಗರೂ ಇಲಿಗಳಲ್ಲಿ ಹೆಣ್ಣಿಗಿಂತ ಗಂಡು ಇಲಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಕಾಂಗರೂ ಇಲಿಗೆ ಹಾವು, ಗೂಬೆ, ನರಿ ಸೇರಿದಂತೆ ಸುತ್ತಮುತ್ತ ಹಲವಾರು ಶತ್ರುಗಳಿದ್ದರೂ. ಅವಸಾನದ ಅಂಚಿಗೆ ತಲುಪಿಲ್ಲ ಈಗಲೂ ಇವು ಹೆಚ್ಚಿನ ಸಂಖ್ಯೆಯಲ್ಲಿವೆ.

ಯಾಕೆ ನೀರು ಕುಡಿಯಲ್ಲ?

ಕಾಂಗರೂ ಇಲಿ ಕೂಡಾ ಮರುಭೂಮಿಯ ಪ್ರಾಣಿಯಾಗಿರುವುದರಿಂದ ಅದು ತಿನ್ನುವ ಸಸ್ಯದ ಬೇರು ಮತ್ತು ಬೀಜಗಳಿಂದ ದೇಹಕ್ಕೆ ಬೇಕಾದ ತೇವಾಂಶವನ್ನು ದೊರಕಿಸಿಕೊಳ್ಳುತ್ತದೆ. ಅದರ ಆಹಾರವೇ ಅದಕ್ಕೆ ನೀರು ಒದಗಿಸುವ ಕಾರಣ ಪ್ರತ್ಯೇಕವಾಗಿ ನೀರು ಕುಡಿಯುವ ಅಗತ್ಯವಿಲ್ಲ. ಇವು ಕಾಂಗರೂಗಳಂತಯೇ ಚರ್ಮದ ಚೀಲಗಳನ್ನು ಹೊಂದಿರುತ್ತದೆ. ಆದರೆ, ಅದರಲ್ಲಿ ಮರಿಗಳನ್ನು ಸಾಕುವ ಬದಲು ಆಹಾರದ ಸಂಗ್ರಹಕ್ಕೆ ಬಳಸುತ್ತದೆ.

 

Thursday, September 12, 2013

ಚೀಲದಲ್ಲಿ ಮರಿ ಸಾಕುವ ಕಾಂಗರೂ!

ಕಾಂಗರೂವನ್ನು ನೋಡಿದೊಡನೆ ಕಣ್ಣುಂದೆ ಬರುವುದು, ಹಿಂಗಾಲುಗಳ ಮೇಲೆ ಕುಳಿತ ತಾಯಿ; ಅದರ ಹೊಟ್ಟೆಯ ಮುಂಭಾಗದ ಚೀಲದಲ್ಲಿ ಕುಳಿತ ಮರಿಯ ಚಿತ್ರ. ಹೊಟ್ಟೆಯಲ್ಲಿ ಮರಿ ಸಾಕಣೆಯ ಚೀಲವನ್ನು ಪಡೆದಿದ್ದರಿಂದಲೇ ಕಾಂಗರೂವನ್ನು ಸಂಚಿ ಸ್ತನಿ (ಹೊಟ್ಟೆ ಚೀಲದ ಪ್ರಾಣಿ) ವರ್ಗಕ್ಕೆ ಸೇರಿಸಲಾಗಿದೆ. ಇದು ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾದ ಪ್ರಾಣಿ. ಹೀಗಾಗಿ ಆಸ್ಟ್ರೇಲಿಯಾವನ್ನು ಕಾಂಗರೂಗಳ ನಾಡು ಎಂದು ಕರೆಯಲಾಗುತ್ತದೆ. 


  • ವೈವಿಧ್ಯಮಯ ಪ್ರಭೇದ:
ಹೊಟ್ಟೆಯಲ್ಲಿ ಚೀಲವಿರುವ ಕಾಂಗರೂಗಳ ಸುಮಾರು 40ಕ್ಕೂ ಹೆಚ್ಚು ಪ್ರಭೇದಗಳಿವೆ. ಬೆಕ್ಕಿನಷ್ಟೇ ಗಾತ್ರದಿಂದ ಹಿಡಿದು ಬಹು ವೈವಿಧ್ಯ ಗಾತ್ರದ ಕಾಂಗರೂಗಳಿವೆ. ಇವುಗಳಲ್ಲಿ ಕೆಂಪು ಕಾಂಗರೂ ಅತ್ಯಂತ ದೊಡ್ಡ ಗಾತ್ರದ್ದು. ಇವು ಮನುಷ್ಯನಿಗಿಂತ ಎತ್ತರ ಮತ್ತು 85 ಕೆ.ಜಿ.ಯಷ್ಟು ತೂಕವಿರುತ್ತವೆ. ಹೆಣ್ಣು ಕಾಂಗರೂವನ್ನು ಬೂಮರ್, ಗಂಡನ್ನು ಫ್ಲೈಯರ್ ಮತ್ತು ಮರಿಯನ್ನು ಜೋಯಿ ಎಂದು ಕರೆಯಲಾಗುತ್ತದೆ.

  • ಕುಪ್ಪಳಿಸುತ್ತಾ ಸಾಗುವ ಓಟ!
ಕಾಂಗರೂವಿನದ್ದು ವಿಶಿಷ್ಟ ರೀತಿಯ ಓಟ. ಉದ್ದನೆಯ ಶಕ್ತಿಶಾಲಿ ಹಿಂಗಾಲು. ಬಾಲವೂ ಅಷ್ಟೇ ಬಲಿಷ್ಠ. ಮುಂಗಾಲು ಚಿಕ್ಕವು. ಹೀಗಾಗಿ ಇವುಗಳಿಗೆ ವೇಗವಾಗಿ ಓಡಲು ಸಾಧ್ಯವಿಲ್ಲ. ಆದರೆ, ಬರಿ ಹಿಂಗಾಲಿನ ಮೇಲೆಯೇ ಜಿಗಿದು, ಜಿಗಿದು ಓಡುವುದು ಇದರ ಕ್ರಮ. ಆದರೂ, ಹೀಗೆ ಕುಪ್ಪಳಿಸುತ್ತಾ ಓಡಿದರೂ, ಮಂದಗಾಮಿಯೇನಲ್ಲ. ತಾಸಿಗೆ 60 ಕಿ.ಮಿ. ವೇಗದಲ್ಲಿ ಓಡಬಲ್ಲದು. ಹಾದಿಗೆ ಅಡ್ಡಬರುವ 10 ಅಡಿ ಎತ್ತರದ ಬೇಲಿಯಾಗಲೀ, 20 ಅಡಿ ಅಗಲದ ಹಳ್ಳ ಕೊರಕಲುಗಳಾಗಲೀ ಕಾಂಗರೂಗಳಿಗೆ ಲೆಕ್ಕಕ್ಕೇ ಇಲ್ಲ.

  • 5 ವರ್ಷಕ್ಕೆ ಹೊಸ ದಂತಪಂಕ್ತಿ!
ಕಾಂಗರೂ ಶುದ್ಧ ಸಸ್ಯಾಹಾರಿ. ಹುಲ್ಲು ಎಲೆಗಳೇ ಇದರ ಆಹಾರ. ಹೀಗಾಗಿ ಮಧ್ಯ ಆಸ್ಟ್ರೇಲಿಯಾದ ಹುಲ್ಲು ಬಯಲು ಮತ್ತು ಅರೆ ಮರುಭೂಮಿ ಪ್ರದೇಶದಲ್ಲಿ ಇದರ ಪ್ರಧಾನ ವಾಸ್ತವ್ಯ. ನೀರು ಮೇವು ಇಲ್ಲದೆ ಮೂರು-ನಾಲ್ಕುದಿನ ಇರುವ ಸಾಮಥ್ರ್ಯ ಕೂಡ ಇದಕ್ಕಿದೆ. ಹುಲ್ಲು  ಎಲೆ ಸೊಪ್ಪುಗಳನ್ನು ಕೇವಲ ಮುಂದಿನ ಹಲ್ಲುಗಳಲ್ಲೇ ಜಗಿದು ಜಗಿದು ಆ ಹಲ್ಲುಗಳು ನಾಲ್ಕು-ಐದು  ವರ್ಷಗಳಲ್ಲಿ ಸಂಪೂರ್ಣ ಸವೆದುಹೋಗುತ್ತವೆ. ಹಾಗಾದಾಗ ಅವು  ಬಿದ್ದುಹೋಗಿ ಅಲ್ಲೇ ಹೊಸ ಹಲ್ಲುಗಳು ಹುಟ್ಟಿಕೊಳ್ಳುತ್ತವೆ. ಕಾಂಗರೂಗಳ 20-25 ವರ್ಷಗಳ ಜೀವಿತಾವಧಿಯಲ್ಲಿ ನಾಲ್ಕೈದುಬಾರಿ ದಂತಪಕ್ತಿಗಳು ನವೀಕರಣಗೊಳ್ಳುತ್ತವೆ. 

  • ಚೀಲದಲ್ಲಿ ಮರಿ ಸಾಕುವ ತಾಯಿ!
ಕಾಂಗರೂಗಳ ಸಂತಾನ ವಿಧಾನವೇ ಒಂದು ಸೋಜಿಗ. ಕಾಂಗರೂ ಮರಿ ಗರ್ಭದಿಂದ ಹೊರಬಂದಾಗ ಒಂದು ಚಿಕ್ಕ ಹುಳುವಿನಂತಿರುತ್ತದೆ. ಅದರ ಉದ್ದ ಒಂದಂಗುಲಕ್ಕಿಂತ ಕಡಿಮೆ. ತೂಕವಂತೂ ಒಂದೆರಡೇ ಗ್ರಾಂ!  ಕಣ್ಣುಗಳು ಇಲ್ಲದ ಕೇವಲ ಮೊಳಕೆಯಂತಹ ಹಿಂಗಾಲು, ರೋಮರಹಿತ ಬೋಳು ತಲೆ. ಇನ್ನೂ ಭ್ರೂಣದಲ್ಲೇ ಇರುವ ಶರೀರ ಅದರದು. ತಾಯಿಯನ್ನು ಕಿಂಚಿತ್ತೂ ಹೋಲದ ಸ್ವರೂಪ. ಅಲ್ಲಿಂದ ಅದರ ಮುಂದಿನ ಎಲ್ಲ ಬೆಳವಣಿಗೆಗಳೂ ಚೀಲದ ಒಳಗೇ ಜರುಗುತ್ತದೆ. ತಾಯಿಯ ಹಾಲು ಕುಡಿಯುತ್ತಾ ಅಲ್ಲೇ ಉಳಿದು ಆರು ತಿಂಗಳ ಅವಧಿಯಲ್ಲಿ ಪ್ರೌಢವಾಗಿ ಚೀಲದಿಂದ ಹೊರಕ್ಕೆ ಇಣುಕುತ್ತದೆ. ಒಂದು ಮರಿ ಪ್ರೌಢವಾಗಿ ಚೀಲವನ್ನು ತೊರೆದ ಒಂದೆರಡು ದಿನಗಳಲ್ಲೇ ಇನ್ನೊಂದು ಹೊಸ ಮರಿ  ಪ್ರಸವಗೊಂಡು ಚೀಲಕ್ಕೆ ಬಂದು  ಸೇರುತ್ತದೆ. ಕುಡಲೇ ತಾಯಿ ಮತ್ತೆ ಗರ್ಭಧರಿಸುತ್ತದೆ. ಹೀಗೆ ಚೀಲದಿಂದ ಹೊರಗಿದ್ದು ಹಾಲು ಕುಡಿಯುವ ಒಂದು ಮರಿ, ಗರ್ಭದೊಳಗೊಂದು  ಭ್ರೂಣ, ಚೀಲದೊಳಗೊಂದು ಮರಿ. ಈ ರೀತಿ ನಿರಂತರವಾಗಿ ಬೇರೆ ಬೇರೆ ವಯಸ್ಸಿನ ಮೂರು ಮರಿಗಳನ್ನು ಏಕಕಾಲಕ್ಕೆ ಪೋಷಿಸುವ ಅತಿ ವಿಶಿಷ್ಟ ಮಾತೆ ಕಾಂಗರೂ.

ಆಹಾರಕ್ಕಾಗಿ ನಿರಂತರ ಬೇಟೆ:

ಇಂಥ ಅವಿರತ ಸಂತಾನ ವರ್ಧನಾ ಕ್ರಮದಿಂದಾಗಿ ಕಾಂಗರೂಗಳು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಪ್ರತಿವರ್ಷ ಚರ್ಮಕ್ಕಾಗಿ ಸಾಕು ಪ್ರಾಣಿಗಳ ಆಹಾರಕ್ಕಾಗಿ ಲಕ್ಷಾಂತರ ಕಾಂಗರೂಗಳನ್ನು ಕೊಲ್ಲಲಾಗುತ್ತಿದೆ. ಇದರಿಂದ ಕಾಂಗರೂಗಳ ಕುಬ್ಜ ಪ್ರಭೇದಗಳು ಮನುಷ್ಯರ ಮತ್ತು ಬೇಟೆಪ್ರಾಣಿಗಳ ದುರಾಕ್ರಮಣದಿಂದ ಅಳಿದು ಹೋಗಿವೆ. ಮತ್ತೂ ಕೆಲವು ಪ್ರಭೇದಗಳು ಅತ್ಯಲ್ಪ ಸಂಖ್ಯೆಗೆ ಇಳಿದಿದೆ.
 

Thursday, September 5, 2013

ಲಕ್ಷದ್ವೀಪ ಎಂಬ ಸುಂದರ ಕಡಲ ತೀರ

ಲಕ್ಷದ್ವೀಪ ಎನ್ನುವುದು ಹವಳದ ದಿಬ್ಬಗಳಿಂದ ಕೂಡಿದ ದ್ವೀಪ ಸಮೂಹ. ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಪ್ರದೇಶ. ಪ್ರವಾಸಿಗರ ಪಾಲಿಗಂತೂ ಇದು ಭೂಮಿಯ ಮೇಲಿನ ಸ್ವರ್ಗ. ಸೂರ್ಯ ಹಾಗೂ ಮರಳಿನೊಂದಿಗೆ ಕಾಲಕಳೆಯಲು, ಹಾಯಾಗಿ ವಿಹರಿಸಲು  ಬಯಸುವವರಿಗಂತೂ ಇದು ನೆಚ್ಚಿನ ತಾಣ. ನಿಸರ್ಗದತ್ತ  ಸೌಂದರ್ಯ ಹಾಗೂ ಆಕರ್ಷಣೆಯೇ ಇದರ ಮೂಲ ಬಂಡವಾಳ.


39 ದ್ವೀಪಗಳ ಸಮೂಹ: 
ಲಕ್ಷದ್ವೀಪ ಎಂದ ಮಾತ್ರಕ್ಕೆ ಇಲ್ಲಿ ಒಂದು ಲಕ್ಷ ದ್ವೀಪಗಳಿವೆ ಎಂಬರ್ಥವಲ್ಲ. ವಾಸ್ತವವಾಗಿ ಇಲ್ಲಿರುವುದು ಬರೀ 39 ನಡುಗಡ್ಡೆ. ಈ ದ್ವೀಪ ಸಮೂಹದ ಒಟ್ಟೂ ವಿಸ್ತೀರ್ಣ ಕೇವಲ 32 ಚದರ್ ಕಿ.ಮೀ. ಒಂದು ಕಾಲದಲ್ಲಿ ಇದನ್ನು ಲಖದೀವ್, ಮನಿಕೋಯ್ ಮತ್ತು ಅಮಿನ್ ದಿವಿ ದ್ವೀಪಗಳು ಎಂದು ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಬ್ರೀಟಿಷರು ಲಕ್ಷದ್ವೀಪವನ್ನು ಭಾರತದ ಭೂ ಪ್ರದೇಶದೊಂದಿಗೆ ಸಂಯೋಜಿಸಿದರು. ಈ ದ್ವೀಪ ಸಮೂಹವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, 10 ತಾಲೂಕುಗಳಾಗಿ ವಿಂಗಡಿಸಲಾಗಿದೆ. ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಅತ್ಯಂತ ಚಿಕ್ಕದು. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. ಇಲ್ಲಿ 12 ಹವಳದ ದ್ವೀಪಗಳು, 3 ಹವಳದ ದಿಬ್ಬಗಳು, 5 ಆಳವಿರದ ಸಾಗರ ಪ್ರದೇಶ ಮತ್ತು 11 ಜನ ನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಳೆಂದರೆ, ಅಗಟ್ಟಿ, ಅಮಿನಿ, ಅನ್ಡ್ರೋಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ವೇನಿ, ಕವರಟ್ಟಿ, ಕಿಲ್ತಾನ್ ಮತ್ತು ಮನಿಕಾಯ್. ಪ್ರವಾಸೋದ್ಯಮದ ಜತಗೆ ಮೀನುಗಾರಿಕೆ ಲಕ್ಷದ್ವೀಪದ ಪ್ರಮುಖ ಉದ್ಯಮ. ಈ ದ್ವೀಪಗಳಲ್ಲಿ ಅಗಟ್ಟಿ ಹಾಗೂ ಬಂಗಾರಂ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ.

ಜಲ ಕ್ರೀಡೆಗೆ ಹೆಸರುವಾಸಿ:
ಇಲ್ಲಿನ ಅನೇಕ ಆಕರ್ಷಕ ತಾಣಗಳು ನೋಡುಗರಿಗೆ ಅತ್ಯಂತ ಉತ್ತೇಜನಕಾರಿ. ರಜಾದಿನಗಳನ್ನು ಕಳೆಯಲು ಹೇಳಿಮಾಡಿಸಿದ ತಾಣ. ಮೀನುಗಾರಿಕೆಯ ಸ್ವಅನುಭವವನ್ನು ಪಡೆಯಬಹುದು. ಮನಸ್ಸಸಿನ ಒತ್ತಡವನ್ನು ಕಡಿಮೆಮಾಡಿಕೊಂಡು ನಿರಾಳರಾಗಬಹುದು. ಸ್ಕೂಬಾ ಡೈವಿಂಗ್ ತಾಣ ಕೂಡಾ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಸದಾ ಚಟುವಟಿಕೆಯಿಂದ ಕುಡಿರುವ ತಾಣ. ಅಲ್ಲದೆ ನೀರಿನ ಆಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಸಾಕಷ್ಟು ತಾಣಗಳು ಸಿಗುತ್ತವೆ.

ನೀಲಿ ಬಣ್ಣದ ಸರೋವರ:

ಸಮುದ್ರದ ನೀರಿನಿಂದ ನಿರ್ಮಾಣವಾದ ಸರೋವರಗಳು ನೀಲಿ ಬಣ್ಣದ್ದಾಗಿವೆ. ಕಡಲ ತೀರ ಕೂಡಾ ಅತ್ಯಂತ ಶುಭ್ರವಾಗಿದ್ದು, ಬಿಳಿ ಬಣ್ಣದಲ್ಲಿ ಸದಾ ಕಂಗೊಳಿಸುತ್ತವೆ.  ತೆಂಗು ಹಾಗೂ ಪಾಮ್ ಮರಗಳು ಸಾಲಾಗಿ ಬೆಳೆದು ನಿಂತಿದ್ದು, ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಜನಪ್ರಿಯ ದ್ವೀಪಗಳು
  • ಕವರಟ್ಟಿ ದ್ವೀಪ
ಲಕ್ಷ ದ್ವೀಪದ ಸಮೂಹದಲ್ಲಿಯೇ ಎಲ್ಲಾ ವಿಧದ ಮೋಜು ಮತ್ತು ಸಾಹಸಕ್ಕೆ ಕರವಟ್ಟಿ ಕೇಂದ್ರ ಸ್ಥಳವಾಗಿದೆ. ಈ ದ್ವೀಪ ಪುಟ್ಟ ಪಟ್ಟಣವಾಗಿದ್ದು, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ರಾಜಧಾನಿಯಾಗಿದೆ. ಅಲ್ಲದೆ ಕೆಲವು ಪಾರಂಪರಿಕ ತಾಣಗಳು ಇಲ್ಲಿವೆ. ಮ್ಯೂಸಿಯಂ ಹಾಗೂ ಮಸೀದಿ ಇವುಗಳಲ್ಲಿ ಪ್ರಮುಖವಾದವು. ಇಲ್ಲಿನ ಬೆಳ್ಳನೆಯ ಮರಳ ತೀರಗಳು ವರ್ಷಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತವೆ.
  • ಅಗಟ್ಟಿ ನಡುಗಡ್ಡೆ.
ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.
 
  • ಬಂಗಾರಂ ದ್ವೀಪ
ಇಲ್ಲಿ ತೆಂಗಿನ ಮರಗಳಿಂದ ಆವೃತ್ತವಾಗಿರುವ ಕಡಲ ತೀರ ಸುಮಾರು 120 ಎಕರೆ ಪ್ರದೇಶವನ್ನು ಆವಸಿದೆ. ಇಲ್ಲಿನ ಪ್ರಸಿದ್ಧ ಐಲ್ಯಾಂಡ್ ರೆಸಾರ್ಟ್ನೀರಿನೊಳಗಿನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಸ್ಕೂಬಾ ಹಾಗೂ ಸ್ಕೋರ್ಕಿಲ್ಲಿಂಗ್ ಅನುಭವ ಪಡೆಯಬಹುದು. ಕಡಲ ತೀರದಲ್ಲಿ ಬಿಳಿ ಬಣ್ಣದ ಅಲೆಗಳು ಮನಸೆಳೆಯುತ್ತವೆ. ತರಹೇವಾರಿ ಜಾತಿಯ ಪಕ್ಷಿಗಳು, ಮೀನುಗಳು, ಮುಳ್ಳಂದಿ, ಗಿಳಿ ಸಂಕುಲಗಳು ಗಮನ ಸೆಳೆಯುತ್ತದೆ.

 

Wednesday, August 28, 2013

ಅಜಂತಾ-ಎಲ್ಲೋರ ಶಿಲ್ಪಕಲೆ

ಅಜಂತಾ ಮತ್ತು ಎಲ್ಲೋರ ಗುಹೆಗಳು ಹಿಂದು, ಬೌಧ್ಧ, ಜೈನ ಧರ್ಮಗಳಿಗೆ ಸಾಕ್ಷಿಯಾಗಿ ನಿಂತಿವೆ. ಇದೊಂದು ಮಹಾರಾಷ್ಟ್ರದ ಔರಂಗಾಬಾದ್ ಹತ್ತಿರವಿರುವ ಐತಿಹಾಸಿಕ ತಾಣ. ಈ ಗುಹೆಗಳು ಯುನೆಸ್ಕೋದಿಂದ ವಿಶ್ವಪಾರಂಪರಿಕ ತಾಣವೆಂದು 1983ರಲ್ಲಿ ಘೋಷಿಸಲ್ಪಟ್ಟಿದೆ. ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 6  ಶತಮಾನದವರೆಗಿನ ಇತಿಹಾಸವನ್ನು ಈ ಗುಹೆಗಳು ಸಾದರ ಪಡಿಸುತ್ತವೆ. ಈ ಗುಹೆಗಳು ಸಂಪೂರ್ಣಗೊಳ್ಳಲು ತೆಗೆದುಕೊಂಡಿದ್ದು, ಅಚ್ಚರಿಪಡುವಂತಹ 800 ವರ್ಷಗಳು ಎಂದು ನಂಬಲಾಗಿದೆ.


1.ಅಜಂತಾ ಗುಹೆಗಳು:

30 ಗುಹೆಗಳ ಗುಂಪಾಗಿರುವ ಅಜಂತಾವು, ಬೌದ್ಧ ಚೈತ್ಯಗಳಿಗೆ ಮತ್ತು ವರ್ಣಚಿತ್ರಗಳಿಗೆ ಹೆಸರುಪಡೆದಿವೆ. ಅಘಾದವಾದ ಕಲ್ಲುಬಂಡೆಗಳನ್ನು ಕೊರೆದು ಇಲ್ಲಿ ಗುಹೆಗಳನ್ನು ನಿರ್ಮಿಸಲಾಗಿದೆ. 

  • ಕಂಡು ಹಿಡಿದಿದ್ದು ಹೇಗೆ?
ಕ್ರಿ.ಪೂ. 2ನೇ ಶತಮಾನದಲ್ಲಿ ಈ ಗುಹೆಗಳು ನಿರ್ಮಾಣಗೊಂಡಿದ್ದರೂ, 19ನೇ ಶತಮಾನಗಳವರೆಗೂ ಇದರ ಪರಿಚಯ ಇರಲಿಲ್ಲ. ಕೆಲವು ಬ್ರಿಟಿಷ್ ಸೈನಿಕರು 1819ರಲ್ಲಿ  ಬೇಟೆಯಾಡಲು ಬಂದ ಸಮಯದಲ್ಲಿ ಕುದುರೆ ಪಾದರಕ್ಷೆಯ ಆಕಾರದ ಕಲ್ಲಿನ ಆಕೃತಿಯನ್ನು ಆಕಸ್ಮಿಕವಾಗಿ ಕಂಡರು. ಇದರಿಂದ ಮನಸ್ಸೋತ ಅವರು, ವನರಾಶಿಯ ಹಿಂದೆ ಅಡಗಿದ್ದ ಮತ್ತಷ್ಟು ಗುಹೆಗಳನ್ನು ಅನ್ವೇಷಿಸಲು ಹೊರಟರು. ಬಳಿಕ ಪುರಾತತ್ವ ಶಾಸ್ತ್ರಜ್ಞರ ತಂಡ ಇಲ್ಲಿ ಉತ್ಖನನ ಕೈಗೊಂಡಾಗ ನಿಬ್ಬೆರಗಾಗುವ ಸಂಗತಿಗಳನ್ನು ಬಯಲಾದವು.

  • ಬುದ್ಧನ ಜೀವನ ಚರಿತ್ರೆ:
    ಉತ್ಖನನದಿಂದ ಬೌದ್ಧ ಸ್ಮಾರಕಗಳ ಹಲವು  ಸ್ತೂಪಗಳು, ದ್ವಾರಪಾಲಗಳು, ವಿಹಾರಗಳು, ಚೈತ್ಯಗಳು, ವರ್ಣಚಿತ್ರಗಳನ್ನು ಹೊರತೆಗೆಯಲಾಯಿತು. ಇಲ್ಲಿ ಒಟ್ಟೂ ಒಟ್ಟೂ 29 ಗುಹೆಗಳಿದ್ದು, ಇವು ಬುದ್ಧನ ಜೀವನಕ್ಕೆ ಸಂಬಂಧಿಸಿದ ಗಮನಾರ್ಹ ಕತೆಗಳನ್ನು ಪ್ರದರ್ಶಿಸುತ್ತವೆ. ಗುಹೆಗಳಲ್ಲಿನ  ವರ್ಣ ಚಿತ್ರಗಳಿಗೆ ಕೆಂಪು, ಹಳದಿ, ಕಾವಿ ಮಣ್ಣು, ತಿಳಿ ಹಸಿರು ಬಣ್ಣ, ಜಿಪ್ಸಮ್, ನೀಲರತ್ನದ ಪುಡಿಗಳನ್ನು ಬಳಸಲಾಗಿದೆ.

 2.ಎಲ್ಲೋರದ ಗುಹೆಗಳು: 

ಔರಂಗಾಬಾದ್ನಿಂದ 30 ಕಿ.ಮೀ ದೂರದಲ್ಲಿರುವ  ರಾಷ್ಟ್ರಕೂಟ ಕನ್ನಡ ಅರಸರಿಂದ ನಿರ್ಮಿಸಲ್ಪಟ್ಟ ಒಂದು ಪುರಾತತ್ವ ಪ್ರದೇಶ. ಕಲ್ಲಿನಿಂದ ಕೆತ್ತಿದ ಬೌದ್ಧ, ಹಿಂದು ಮತ್ತು ಜೈನ ದೇವಸ್ಥಾನ ಮತ್ತು  ಸನ್ಯಾಸಿಗಳ ಮಂದಿರಗಳನ್ನು ಒಳಗೊಂಡ 34 ಗುಹೆಗಳಿವೆ. ಈ ಗುಹೆಗಳನ್ನು 5 ಮತ್ತು ಆರನೇ ಶತಮಾನಗಳ ಮಧ್ಯೆ ನಿರ್ಮಿಸಲಾಗಿದೆ. ಅವುಗಳಲ್ಲಿ 12 ಬೌದ್ಧ ಗುಹೆಗಳು, 17 ಹಿಂದು ಮತ್ತು 5 ಜೈನ ಗುಹೆಗಳಾಗಿವೆ.
  • ವಿಶ್ವಕರ್ಮಗುಹೆ:
ಬೌದ್ಧಗುಹೆಗಳಲ್ಲಿ 10ನೇ ಗುಹೆ ವಿಶ್ವಕರ್ಮವೊಂದೇ ಚೈತ್ಯ ಗೃಹವಾಗಿದೆ. ಇದನ್ನು ಸ್ಥಳೀಯವಾಗಿ ಸುತಾರ್ ಕ ಜೋಪ್ಡ (ಬಡಗಿಯ ಗುಡಿಸಲು) ಎಂದು ಕರೆಯಲಾಗುತ್ತದೆ. 3.30 ಮೀ.ಎತ್ತರದ ವ್ಯಾಖ್ಯಾನ ಮುದ್ರ (ಬೋಧನ ಭಂಗಿ) ಕೆತ್ತಲಾಗಿದೆ. ಬಹು ದೊಡ್ಡದಾದ ಬೋಧಿ ವೃಕ್ಷವನ್ನು ಹಿಂಬದಿಯಲ್ಲಿ ಕೆತ್ತಲಾಗಿದೆ. ಗುಹೆ ಚೈತ್ಯ ಕಮಾನಿನ ಮೇಲು ಛಾವಣಿಯನ್ನು ಹೊದಿದೆ. ಇದರ ಅಡ್ಡಪಟ್ಟಿಗಳನ್ನು ಮರದ ಕೆತ್ತನೆಗಳನ್ನೋಲುವಂತೆ ಕಲ್ಲಿನಲ್ಲಿ ಕೆತ್ತಲಾಗಿದೆ.
  • ದಶಾವತಾರ ಗುಹೆ:
ಇದು 15ನೇ ಗುಹೆಯಾಗಿದ್ದು ಬೌದ್ಧ ಸನ್ಯಾಸಿ ಮಂದಿರವಾಗಿತ್ತು. ಮಧ್ಯಭಾಗದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಿದ ಮಂಟಪ ಮತ್ತು ಹಿಂಬದಿಯಲ್ಲಿ ಎರಡು ಮಹಡಿಯ ಕೊರೆದ ಮಂದಿರಗಳನ್ನು ಒಳಗೊಂಡಿದೆ.
 
  • ಹಿಂದು  ಗುಹೆಗಳು:
ಎಲ್ಲೋರದ ಹಿಂದು ಗುಹೆಗಳು ಆರನೇ ಶತಮಾನದ ಅಂತ್ಯದಿಂದ 8ನೇ ಶತಮಾನದ ಕೊನೆಯವರೆಗೆ ನಿರ್ಮಾಣಗೊಂಡವು. 16ನೇ ಗುಹೆ ಕೈಲಾಸ ಅಥವಾ ಕೈಲಾಸನಾಥ ಎಂದು ಪ್ರಸಿದ್ಧವಾಗಿದೆ. ಇದು ಎಲ್ಲೋರದ ಸಾಟಿಯಿಲ್ಲದ ಆಕರ್ಷಣೆಯ ಕೇಂದ್ರಬಿಂದು.
  • ಜೈನ ಗುಹೆ:
ಎಲ್ಲೋರದಲ್ಲಿನ 5 ಜೈನ ಗುಹೆಗಳು 9 ಮತ್ತು 10ನೇ ಶತಮಾನಕ್ಕೆ ಸೇರಿವೆ. ಜೈನ ತತ್ವಜ್ಞಾನದ ಮತ್ತು ಸಂರ್ಪದಾಯದ ಒಂದು ನಿಶ್ಚಿತ ಸ್ವರೂಪವನ್ನು ಜೈನಗುಹೆಗಳು ಹೇಳುತ್ತವೆ.
 

Wednesday, August 21, 2013

ಕಾರ್ನಾಕ್ ಮಂದಿರಗಳ ಸರಪಳಿ

ಕಾರ್ನಾಕ್ ಈಜಿಪ್ಟ್ ನ ದೇವಾಲಯಗಳ ಸಮುಚ್ಚಯ. ಪ್ರಪಂಚದ ಅತ್ಯಂತ ವಿಶಾಲ ಹಾಗೂ ಪುರಾತನ ದೇವಾಲಯ ಎನ್ನುವುದು ಇದರ ಹೆಗ್ಗಳಿಕೆ. ನೈಲ್ನದಿಯ ಪೂರ್ವದಂಡೆಯಲ್ಲಿನ ಲಕ್ಸಾರ್ ಪಟ್ಟಣದಲ್ಲಿ ಕಾರ್ನಾಕ್ ಮಂದಿರ ಸರಪಳಿ ನಿರ್ಮಾಣಗೊಂಡಿದೆ.  ಈ ಮಂದಿರಗಳ ಸರಪಳಿ 60 ಎಕರೆ ಪ್ರದೇಶಕ್ಕೆ ಹರಡಿಕೊಂಡಿದೆ. ದೇವಾಲಯಗಳ ನಗರ
ಎಂತಲೂ ಇದನ್ನು ಕರೆಯುತ್ತಾರೆ.

  • ವಾಸ್ತುಶಿಲ್ಪದ ಅಚ್ಚರಿ:
ಗೀಜಾದ ಬೃಹತ್ ಪಿರಮಿಡ್ಡುಗಳಂತೆಯೇ ಇಲ್ಲಿನ ದೇವಾಲಯದ ಕಂಬಗಳು ಬೃಹದಾಕಾರ ಮತ್ತು ಭವ್ಯತೆಗೆ ಪ್ರಸಿದ್ಧಿ ಪಡೆದಿವೆ. ದೇವಾಲಯ ನಗರಿಯಲ್ಲಿ ಅಮುನ್, ಮುಖ್, ಕೊಂನ್ಸು ಹಾಗೂ ಯುದ್ಧ ದೇವತೆ ಮೊಂಟು ಸೇರಿದಂತೆ ಹಲವಾರು ದೇವರುಗಳ 25 ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ದೇವಾಲಯವಿದೆ. ಕಾರ್ನಾಕ್ ದೇವಾಲಯ ಸಮುಚ್ಚಯ ವಾಸ್ತುಶಿಲ್ಪ ಶಾಸ್ತ್ರದ ಅಚ್ಚರಿಯಲ್ಲೊಂದು.

  • ನಿರ್ಮಾಣಗೊಂಡಿದ್ದು ಹೇಗೆ?
ಕ್ರಿ.ಪೂ. 16ನೇ ಶತಮಾನದಲ್ಲಿ ಕಾರ್ನಾಕ್ ದೇವಾಲಯ ಸಮುಚ್ಚಯ ನಿರ್ಮಾಣ ಆರಂಭವಾಯಿತು.  ಈ ಮಂದಿರಗಳ ಸರಪಳಿಯನ್ನು 1500 ವರ್ಷಗಳ ಕಾಲ ನಿರಂತರವಾಗಿ ಕಟ್ಟುತ್ತಾ ಹೋಗಲಾಗಿದೆ. ಸುಮಾರು 50 ಫೆರೋ ದೊರೆಗಳು ಇವುಗಳ ನಿರ್ಮಾಣದಲ್ಲಿ ಕೈಜೋಡಿಸಿದ್ದರು. ತಲೆಮಾರಿನಿಂದ ತಲೆಮಾರಿಗೆ ಈ ನಿರ್ಮಾಣಗಳು ಬೆಳೆಯುತ್ತಾ ಹೋದವು. ಸೂರ್ಯನ ಕಿರಣಗಳು ಒಳ ಪ್ರವೇಶಿಸದಷ್ಟು ದಟ್ಟವಾಗಿ ಒಂದಕ್ಕೊಂದು ತಾಗಿಕೊಂಡಂತೆ ದೇವಾಲಯಗಳನ್ನು ಕಟ್ಟಲಾಗಿದೆ. ಫೆರೋ ದೊರೆಗಳ ವೈಭವ ಮತ್ತು ಆ ಕಾಲದ ಶಿಲ್ಪಿಗಳ ಸೃಜನಶೀಲತೆಯ ಅನಾವರಣವನ್ನು ಇಲ್ಲಿ ಕಾಣಬಹುದುಕ್.

  • ಕರ್ನಾಕ್ ಇತಿಹಾಸ:
ಕಾರ್ನಾಕ್ ಎನ್ನುವುದು ಅರಬರು ಇಟ್ಟ ಹೆಸರು. ಇಜಿಪ್ಟಿಯನ್ನರು ಇದನ್ನು ಇಪೆಟ್ ಇಸೂಟ್ ಎನ್ನುತ್ತಿದ್ದರು. ಅಂದರೆ ಶ್ರೇಷ್ಠವಾದ ಪ್ರದೇಶ ಎಂದರ್ಥ. ಕ್ರಿ.ಪೂ. 1550ರಿಂದ 1069ರವರೆಗೂ ಈಜಿಪ್ಟನ್ ರಾಜಧಾನಿಯಾಗಿ ಕಂಗೊಳಿಸಿದ್ದ ಥೀಬ್ಸ್ (ಈಗಿನ ಲಕ್ಸಾರ್) ನಗರದ ಹೃದಯಭಾಗದಂತೆ ಇದ್ದ ಕಾರ್ನಾಕ್ ಧಾಮರ್ಿಕ, ರಾಜಕೀಯ, ಆಡಳಿತ, ಸಂಪತ್ತಿನ ಸಂಗ್ರಹಣೆಯ ಕೇಂದ್ರವಾಗಿತ್ತು. 1900ರಲ್ಲಿ ನಿರ್ಮಾಣಗೊಂಡ ಅಮುನ್ ದೇಗುಲ ಕಾರ್ನಾಕ್ ಸಮುಚ್ಚಯದಲ್ಲಿ ಪ್ರಸಿದ್ಧವಾದುದು. ಈ ದೇಗುಲ ಒಂದು ಸಾವಿರ ಅಡಿ ಉದ್ದ ಮತ್ತು 300 ಅಡಿ ಅಗಲವಾದ ವಿಸ್ತೀರ್ಣಹೊಂದಿದೆ. ಈ  ದೇವಾಲಯದ ಒಳಗೊಂಡ ಮುಖ್ಯಕಟ್ಟಡಗಳ ಸಮುಚ್ಚಯದಲ್ಲಿ ಹಿಂದೆ 86 ಸಾವಿರ ಮೂರ್ತಿಗಳು ಇದ್ದವಂತೆ.

ಕಂಬಸಾಲಿನ ಹಜಾರ:
ಕಂಬಗಳ ಸಾಲಿನ ಹಜಾರ 50,000 ಚದರ್ ಅಡಿ ವಿಸ್ತಾರವಾಗಿದ್ದು, 134 ಲಂಬ ಸಾಲು ಮತ್ತು 16 ಅಡ್ಡ ಸಾಲುಗಳಲ್ಲಿ ಇದನ್ನು ಹೊಂದಿದೆ. ಕಂಬಗಳು 80ರಿಂದ 85 ಅಡಿ ಎತ್ತರ ಮತ್ತು ಮೂರು ಮೀಟರ್ ಅಗಲ ವಾಗಿವೆ. ಸುಮಾರು 20 ಟನ್ ಭಾರದ ಕಲ್ಲಿನ ಚಪ್ಪಡಿಗಳನ್ನು ಕಂಬಗಳ ಮೇಲೆ ಹಾಸಿರುವುದು ವಿಶೇಷ. ಇದು ಈಗಲೂ ಜಗತ್ತಿನ ಅತ್ಯಂತ ದೊಡ್ಡ ಧಾಮರ್ಿಕ ಹಜಾರ ಎನ್ನುವ ಕೀರ್ತಿಗೆ ಭಾಜನವಾಗಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಹೆಬ್ಬಾಗಿಲುಗಳಿವೆ. ನಾಜೂಕು ಕೆತ್ತನೆಗಳನ್ನೂ  ಚಿತ್ತಾರಗಳನ್ನೂ ಒಳಗೊಂಡಿರುವ ವಂಶಾಲಾಂಛನ ಸ್ತಂಭಗಳು ಬೆರಗು ಹುಟ್ಟಿಸುತ್ತವೆ. ಕಂಬಸಾಲಿನ ಹಜಾರಕ್ಕೆ ಹತ್ತಿರದಲ್ಲೇ ಗರುಡಗಂಬದಂತೆ ಚೂಪುತುದಿಯ ಎರಡು ಗರುಡಗಂಬಗಳನ್ನು ನೆಡಲಾಗಿದೆ. ಇದನ್ನು ಆಬ್ಲಿಸ್ಕ್ ಎನ್ನುತ್ತಾರೆ. ಏಕೈಕ ಮಹಿಳಾ ಫೆರೋ ಆಗಿದ್ದ ಹಾಟ್ಷೇಪ್ಸುಟ್ ರಾಣಿ  ನಿಮರ್ಿಸಿರುವ ಈ ಚೂಪು ಕಂಬಗಳ ಮೇಲೆ ಆಕೆಯ ಸಂದೇಶವನ್ನು ಕೆತ್ತಲಾಗಿದೆ.

Thursday, August 15, 2013

ಸಮುದ್ರದ ಒಳಗೊಂದು ಅರಮನೆ

ಐಷಾರಾಮಿ ಹೋಟೆಲ್ ಎಂದಾಕ್ಷಣ ನಮಗೆ ನೆನಪಾಗುವುದು ದುಬೈ. ಅಲ್ಲಿನ ಬುರ್ಜ್ ಅಲ್ ಅರಬ್ ಕಟ್ಟಡ. ಆದರೆ, ಅದನ್ನೂ ಮೀರಿಸುವ ಹೋಟೆಲ್ಗಳು ದುಬೈನಲ್ಲಿ ನಿರ್ಮಾಣವಾಗಿದ್ದು, ಇನ್ನೇನು ಕೆಲ ದಿನದಲ್ಲೇ ಪ್ರವಾಸಿಗರಿಗೆ ತೆರದುಕೊಳ್ಳಲಿದೆ. ಅಂದಹಾಗೆ ಇದು ನೆಲದ ಮೇಲೆ ನಿರ್ಮಿಸಿದ್ದಲ್ಲ. ಸಂಪೂರ್ಣ ನೀರಿನ ಒಳಗೇ ಮುಳುಗಿರುವ ಹೋಟೆಲ್. ಅದೇ, ಹೈಡ್ರೊಪೋಲಿಸ್ ಅಂಡರ್ವಾಟರ್ ಹೋಟೆಲ್. 


 ಕನಸಿನ ಅರಮನೆ
ಪ್ರವಾಸಿಗರು ಸಮುದ್ರದ ಜಲಚರಗಳನ್ನು ಕಣ್ಣಾರೆ ವೀಕ್ಷಿಸುತ್ತಾ, ವಿಶ್ರಾಂತಿ ಪಡೆದುಕೊಳ್ಳುವ ಸಲುವಾಗಿ ಹೋಟೆಲ್ ನಿರ್ಮಾಣ ಮಾಡಲಾಗಿದೆ. ಇದನ್ನು ಕನಸಿನ ಅರಮನೆ ಎಂದೇ ಬಣ್ಣಿಸಲಾಗಿದೆ. ಇಲ್ಲಿ ಕಾಲಿಟ್ಟರೆ ಸಮುದ್ರ ಪ್ರಾಣಿಗಳ ಜತೆಗೆ ನಾವೂ ಜೀವಿಸುತ್ತಿರುವ ಅನುಭವ. ದುಬೈನಲ್ಲಿರುವ ಜಮೆರಿಶ್ ಸಮುದ್ರ ತೀರದ ಪರ್ಷಿಯನ್ ಕೊಲ್ಲಿಯ ವಿಶಾಲವಾದ ಪ್ರದೆಶದಲ್ಲಿ ಹೈಡ್ರೊಪೋಲಿಸ್ ಹೋಟೆಲ್ ಇದೆ. ಇದು ಜಗತ್ತಿನ ಮೊದಲ ಐಶಾರಾಮಿ ಸಮುದ್ರದ ಒಳಗಿನ ಹೋಟೆಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾಲ್ಡೀವಸ್, ಫಿಜಿ, ಮುಂತಾಡೆದೆ ಈಗಾಗಲೇ ಸಮುದ್ರದ ಒಳಗೆ ಹೋಟೆಲ್ ಇದ್ದರೂ. ಇಷ್ಟೊಂದು ವಿಶಾಲವಾದ ಹೋಟೆಲ್ ಇದೇ ಮೊದಲು. ಜೋಕಿಮ್ ಹೌಸರ್ ಎಂಬಾತ ಹೈಡ್ರೊಪೋಲಿಸ್ ಹೋಟೆಲ್ನ ಶಿಲ್ಪಿ.

ಜಗತ್ತಿನ ದುಬಾರಿ ಹೋಟೆಲ್
ಹೈಡ್ರೊಪೋಲಿಸ್ ಹೋಟೆಲ್ ಸಮುದ್ರದ ಒಳಗೆ 260 ಹೆಕ್ಟೇರ್ ವಿಶಾಲವಾದ ಪ್ರದೇಶಕ್ಕೆ ಚಾಚಿಕೊಂಡಿದೆ. ಹೊಟೆಲ್ನ ಒಡೆತನ ದೊರೆ ಶೇಕ್ ಮಹಮ್ಮದ್ಗೆ ಸೇರಿದ್ದಾಗಿದೆ. ಇದಕ್ಕೆ ಆತನೇ ಹಣ ಒದಗಿದ್ದಾನೆ. ಹೋಟೆಲ್ ನಿರ್ಮಾಣ ವೆಚ್ಚ 3 ಸಾವಿರ ಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಇದರ ನಿರ್ಮಾಣ 2006ರಲ್ಲಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಹೈಡ್ರೊಪೊಲೀಸ್ ಹೋಟೆಲ್ ಜಗತ್ತಿನ ಅತ್ಯಂತ ದುಬಾರಿ ಹೋಟೆಲ್ ಎಂದು ಗುರುತಿಸಿಕೊಂಡಿದೆ. 

ಹೋಟೆಲ್ ಹೇಗಿರುತ್ತೆ?

ಸಮುದ್ರ ಮಟ್ಟದಿಂದ 66 ಅಡಿ ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಹೋಟೆಲ್ಗೆ ಅಳವಡಿಸಾದ ಮೇಲ್ಛಾವಣಿ ಸಂಪೂರ್ಣ ಪಾರದರ್ಶಕ ಗಾಜುಗಳಿಂದ ಕೂಡಿದೆ. ಹೋಟೆಲ್ಗೆ ರೈಲಿನ ಮೂಲಕ ತೆರಳಲು ಸುರಂಗ ವ್ಯವಸ್ಥೆ ಇದೆ. ಪ್ರವಾಸಿಗರು ವಿಶ್ರಾಂತಿ ಪಡೆಯುವ 220 ವಿಶಾಲ ಕೋಣೆಗಳನ್ನು ಹೋಟೆಲ್ ಹೊಂದಿದೆ.  ಕಿಟಕಿಯಲ್ಲಿ ಕತ್ತುಚಾಚುತ್ತಾ, ಅತ್ತಿತ್ತ ಓಡಾಡುವ ಮೀನುಗಳನ್ನು ಆರಾಮವಾಗಿ ಕುಳಿತು ವೀಕ್ಷಿಸುವ ವ್ಯವಸ್ಥೆ ಇದೆ. ಹೋಟೆಲ್ ಒಳಗಿನ ಉಳಿದ ಜಾಗದಲ್ಲಿ ಬಾರ್, ರೆಸ್ಟೋರೆಂಟ್, ಥೀಮ್ ಕೋಣೆಗಳು ಮತ್ತು ಸಭಾಂಗಣ ಕೂಡಾ ಇದೆ.

ಗಾಳಿ ಬೆಳಕು ಹೇಗೆ ಸಿಗುತ್ತೆ? 

ಹೋಟೆಲ್ ಅರ್ಧ ಚಂದ್ರಾಕೃತಿಯ ಮಡಚಿಕೊಳ್ಳುವ ಛಾವಣಿ ಅಳವಡಿಸಲಾಗಿದ್ದು, ತೆರದ ಆಗಸದಲ್ಲಿ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ. ಛಾವಣಿ ತೆರೆದು ಕೊಂಡಾಗ ಹೋಟೆಲ್ಗೆ ಗಾಳಿ ಬೆಳಕಿನ ಪೂರೈಕೆಯಾಗುತ್ತದೆ. ಹೋಟೆಲ್ಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗದ ರೀತಿಯಲ್ಲಿ ಯಾಂತ್ರಿಕ ಉಪಕರಣಗಳನ್ನು ಹೋಟೆಲ್ಗೆ ಅಳವಡಿಲಾಗಿದೆ. ಒಂದು ವೇಳೆ ಹೋಟೆಲ್ಗೆ ಉಗ್ರರ ಭೀತಿ ಎದುರಾದರೆ, ಶತ್ರುಗಳ ವಿರುದ್ಧ ಹೋರಾಡಲು ತನ್ನದೇ ಆದ ಕ್ಷಿಪಣಿ ವ್ಯವಸ್ಥೆಯನ್ನು ಹೋಟೆಲ್ ಹೊಂದಿದೆ.

 

ಕ್ರಿಸ್ಟ್ ದಿ ರಿಡೀಮರ್

ಏಸುಕ್ರಿಸ್ತನ ಈ ಪ್ರತಿಮೆ ಬ್ರೆಜಿಲ್ ಜನರ ಕ್ರಿಶ್ಚಿಯನ್ ಧರ್ಮದ ಸಂಕೇತ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಬ್ರೆಜಿಲ್ನ ರಿಯೊ ಡಿ ಜನೇರಿಯೋದಲ್ಲಿರುವ ಕೊರ್ಕೊವಾಡೊ ಪರ್ವತದ ಮೇಲೆ ನಿಮರ್ಮಾಣಗೊಂಡಿದೆ. ರಿಡೀಮರ್ ಅಂದರೆ ವಿಮೋಚನೆ ನೀಡುವವನು ಎಂದು ಅರ್ಥ. ವಿಶಾಲವಾದ ತೋಳುಗಳನ್ನು ಅಗಲಿಸಿ ನಿಂತಿರುವ ಈ ಪ್ರತಿಮೆ ಎಲ್ಲರನ್ನೂ ಪ್ರೀತಿಸುವ, ಎಲ್ಲವನ್ನೂ ಸ್ವೀಕರಿಸುವ, ತನ್ನ ಬಳಿ ಬಂದವರನ್ನು ಅಪ್ಪಿಕೊಳ್ಳುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಕ್ರಿಶ್ಚಿಯನ್ ಧರ್ಮದ ಕ್ರಾಸ್ ಚಿಹ್ನೆಯಂತೆಯೂ ಇದನ್ನು ಗುರುತಿಸಬಹುದು. ಜಗತ್ತಿನ ಶಾಂತಿಯ ದ್ಯೋತಕವೂ ಹೌದು. ಇದು ಬ್ರೆಜಿಲಿಯನ್ ಜನರ ಪ್ರೀತಿಯ ಲಾಂಛನ. ಕ್ರಿಸ್ಟ್ ದಿ ರಿಡೀಮರ್ ಏಸುವಿನ 5ನೇ ಅತಿದೊಡ್ಡ ಪ್ರತಿಮೆ.

 


 ಪ್ರತಿಮೆ ನಿಮರ್ಮಿಸಿದ್ದು ಏಕೆ?
1850ರಲ್ಲಿ ಬ್ರೆಜಿಲಿಯನ್ನರು ತಮ್ಮದೇ ಆದ ಧಾರ್ಮಿಕ ಪ್ರತಿಮೆಯನ್ನು ರಿಯೊ ಡಿ ಜನೇರಿಯೋದಲ್ಲಿ ಸ್ಥಾಪಿಸುವ ಬಯಕೆಹೊಂದಿದ್ದರು. ಫ್ರಾನ್ಸ್ ಸಂತನೊಬ್ಬ ಏಸುವಿನ ಪ್ರತಿಮೆ ನಿರ್ಮಿಸುವ ಕುರಿತು ಸಲಹೆ ನೀಡಿದ್ದ. ಆದರೆ, ಇದಕ್ಕೆ ಅನುಮತಿ ದೊರೆಯಲಿಲ್ಲ. 60 ವರ್ಷದ ಬಳಿಕ, 1910ರಲ್ಲಿ ನಡೆದ ಆರ್ಚ್ ಬಿಷಪ್ಪರ ಸಭೆಯಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಲಾಯಿತು. ಧಾಮರ್ಿಕ ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯರಿಂದ ಅಪಾರ ಪ್ರಮಾಣದ ಹಣ ಸಂಗ್ರಹಣೆ ಮಾಡಲಾಯಿತು. ಸುದೀರ್ಘ ಚಿಂತನೆಯ ಬಳಿಕ, ಏಸುವಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಯಿತು. ಬ್ರೆಜಿಲ್ ಸ್ವಾತಂತ್ರ್ಯಗಳಿಸಿದ ದಿನವಾದ ಏ.22, 1922ರರಲ್ಲಿ ಪ್ರತಿಮೆ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು. 9 ವರ್ಷದ ಬಳಿಕ ಪ್ರತಿಮೆ ನಿಮರ್ಮಾಣ ಪೂರ್ಣಗೊಂಡಿತು.

ಕ್ರಿಸ್ಟ್ ದಿ ರಿಡೀಮರ್ ವಿಶೇಷತೆ:
ಸೋಪ್ಸ್ಟೋನ್ ಮತ್ತು ಕಾಂಕ್ರೀಟ್ನಿಂದ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆ ನಿರ್ಮಿಸಲಾಗಿದೆ. 2300 ಅಡಿ ಎತ್ತರದ ಕೊರ್ಕೊವಾಡೊ ಬೆಟ್ಟದ ತುತ್ತತುದಿಯಲ್ಲಿ ಇದನ್ನು ಸ್ಥಾಪಿಸಿರುವುದು ವಿಶೇಷ. ಈ ಏಸುವಿನ ಪ್ರತಿಮೆ 98 ಅಡಿ ಎತ್ತರವಾಗಿದೆ. ತೋಳುಗಳು 92 ಅಡಿ ಅಗಲವಾಗಿದೆ. 26 ಅಡಿ ಎತ್ತರದ ಪಾದಪೀಠದ  ಮೇಲೆ ಇದನ್ನು ನಿಮರ್ಿಸಲಾಗಿದೆ. ಪ್ರತಿಮೆಯ ತೂಕ 635 ಟನ್. ಅಕ್ಟೋಬರ್ 12, 1931ರಂದು ಪ್ರತಿಮೆಯ ಉದ್ಘಾಟನೆ ನೆರವೇರಿತು. ಜಗತ್ತಿನ ಅತಿ ಎತ್ತರದ ಪ್ರತಿಮೆಗಳಲ್ಲಿ ಇದು ಕೂಡಾ ಒಂದೆನಿಸಿದೆ.  ಬ್ರೆಜಿಲ್ನ ಹೆಯಿಟರ್ ಡಾ ಸಿಲ್ವಾ ಕೊಸ್ಟಾ ಪ್ರತಿಮೆಯ ವಿನ್ಯಾಸಕಾರ. ಪ್ರತಿಮೆ ನಿರ್ಮಾ ಣಕ್ಕೆ ಅಂದಾಜು 2 ಲಕ್ಷದ 50 ಸಾವಿರ ಡಾಲರ್ ವೆಚ್ಚಮಾಡಲಾಗಿದೆ. ಪ್ರತಿಮೆಯ ಬುಡಕ್ಕೆ ತಲುಪಬೇಕಾದರೆ ಕೊಕರ್ೊವಾಡೊ ಬೆಟ್ಟವನ್ನು ಏರಿದ ಬಳಿಕ ಮತ್ತೆ 220 ಮೆಟ್ಟಿಲುಗಳನ್ನು ಹತ್ತಬೇಕು. 2007ರಲ್ಲಿ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆಗೆ ಆಧುನಿಕ ಜಗತ್ತಿನ ಏಳು ಅದ್ಭುತಗಲ್ಲಿ ಒಂದೆಂದು ಮಾನ್ಯತೆ ನೀಡಲಾಯುತು. ರಾತ್ರಿಯ ವೇಳೆ ಪ್ರತಿಮೆಗೆ  ಪ್ರಖರ ಬೆಳಕನ್ನು ಹಾಯಿಸಲಾಗುತ್ತದೆ. ಆ ಸಮಯದಲ್ಲಿ ಪ್ರತಿಮೆ ತೋಳನ್ನು ಅಗಲಿಸಿ ಆಕಾಶದಲ್ಲಿ ತೇಲಿದಂತೆ ಭಾಸವಾಗುತ್ತದೆ. ಜತೆಗ ರಿಯೋ ಪಟ್ಟಣದ ಸೌಂದರ್ಯವನ್ನು ಸಹ ಆನಂದಿಸಬಹುದು.

ಪುನರುತ್ಥಾನ:
ಪ್ರಖರವಾದ ಬೆಳಕನ್ನು ಹಾಯಿಸಿದ್ದರಿಂದ ಪ್ರತಿಮೆಗೆ ಹಾನಿ ಸಂಭವಿಸಿತ್ತು. ಬಳಿಕ 2008ರಲ್ಲಿ ಪ್ರತಿಮೆಯ ಪುನರುತ್ಥಾನ ಮಾಡಲಾಗಿದೆ. ಪ್ರತಿಮೆಗೆ ಬಳಸಲಾದ ಕಲ್ಲನ್ನು ಸ್ವೀಡನ್ನಿಂದ ತರಲಾಗಿದ್ದು, ಪ್ರತಿಮೆಯ ಪುನರುತ್ಥಾನಕ್ಕೂ ಅದೇ ಮೂಲ ಶಿಲೆಗಳನ್ನೇ ಬಳಸಲಾಗಿದೆ. ಏಸುವಿನ ಬಲಗೈ ದಕ್ಷಿಣ ರಿಯೋ ಡಿ ಜನೇರಿಯೋ ಪಟ್ಟಣವನ್ನು  ಮತ್ತು ಎಡಗೈ ಉತ್ತರ ರೊಯೋ ಡಿ ಜನೇರಿಯೋ ಪಟ್ಟಣವನ್ನು ತೋರಿಸುತ್ತದೆ.